ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಹೋಬಳಿಯ ಅಭಿವೃದ್ದಿಗಾಗಿ ₹ 30 ಕೋಟಿಗಳನ್ನು ವೆಚ್ಚ ಮಾಡಲಾಗುವುದು ಎಂದು ಶಾಸಕ ಪಿ ರವಿಕುಮಾರ್ ಗಣಿಗ ತಿಳಿಸಿದರು.
ಬಸರಾಳು ಹೋಬಳಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಸರಾಳು ಹೋಬಳಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕೃಷಿ ಭವನ, 7 ಕೋಟಿ ವೆಚ್ಚದಲ್ಲಿ ಹೇಮಾವತಿ ಆಧುನಿಕರಣ, ಸಾರ್ವಜನಿಕ ಸ್ಮಶಾನಕ್ಕೆ 20 ಲಕ್ಷ, ಬಸರಾಳು ಗ್ರಾಮ ದಿಂದ ಮುತ್ತೇಗೆರೆ ಗ್ರಾಮಕ್ಕೆ 10 ಕೋಟಿ ವೆಚ್ಚದಲ್ಲಿ ರಸ್ತೆ ಆಧುನೀಕರಣ, ನಾಡಕಚೇರಿ ಮತ್ತು 50 ಬೆಡ್ ಆಸ್ಪತ್ರೆಗೆ ಯೋಜನೆ ಸಿದ್ಧತೆ, 25 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಎಸ್ ಸಿ ಕಾಲೋನಿ ಅಭಿವೃದ್ಧಿಗೆ 25 ಲಕ್ಷ, ಬಸರಾಳು ಹೋಬಳಿ ಕೇಂದ್ರದ ರಸ್ತೆಗೆ 1 ಕೋಟಿ ಸೇರಿದಂತೆ ಬಸರಾಳು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒಟ್ಟು 30 ಕೋಟಿ ಅನುದಾನ ಕಾಯಕಲ್ಪ ಕೈಗೊಳ್ಳಲಾಗಿದೆ ಎಂದರು.
ಚಿಕ್ಕ ಮಂಡ್ಯ ಗ್ರಾಮದಿಂದ ಬಿಳಿದೆಗಲು ಗ್ರಾಮದವರೆಗೆ ಗುಂಡಿ ಬಿದ್ದಿರುವ ರಸ್ತೆಗೆ 10 ಕೋಟಿ ಮೀಸಲಿಡಲಾಗಿದೆ. ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ. ವಿರೋಧಪಕ್ಷದವರು ಬರೀ ಪೂಜೆ ಮಾಡಿ ಹೋಗ್ತಿದ್ರು ನಾವು ಉದ್ಘಾಟನೆ ಮಾಡುತ್ತಿದ್ದೇವೆ. 70 ವರ್ಷ ಸ್ವತಂತ್ರ ಭಾರತದಲ್ಲಿ ಈ ಪ್ರಮಾಣದ ಅಭಿವೃದ್ಧಿ ಅನುದಾನ ನೀವು ನೋಡಿರುವುದಿಲ್ಲ. ಎಂಪಿ ಚುನಾವಣೆಯಲ್ಲಿ ನೀವು ನಡೆದುಕೊಂಡಿದ್ದು ನನಗೆ ಇಷ್ಟ ಆಗಲಿಲ್ಲ. ಕೆಲಸ ಮಾಡುವವರಿಗೆ ವೋಟ್ ಹಾಕಬೇಕು ಕೈಗೆ ಸಿಗದವರಿಗೆ ವೋಟ್ ಹಾಕಿದ್ದೀರಿ. ನಾನು ಗೌಡ್ರೆ ನೀವು ಗೌಡ್ರೆ ಎಲ್ರೂ ಗೌಡ್ರೆ, ಬರೀ ಕಥೆ ಹೇಳಿದ್ರೆ ಆಗಲ್ಲ ಕೆಲಸ ಮಾಡಬೇಕು. ನಿಮ್ಮ ಕೈಗೆ ಸಿಗುವ ಶಾಸಕ ನಿಮ್ಮ ಕೈಗೆ ಸಿಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ ಎಂದರು.
ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಕಚೇರಿ ತೆರೆದು ಪ್ರತಿ ಶನಿವಾರ ಬಸರಾಳು ಹೋಬಳಿ ಕೇಂದ್ರದಲ್ಲಿ ನಿಮ್ಮ ಅಹವಾಲುಗಳನ್ನು ಸ್ವೀಕರಿಸುತ್ತೇನೆ, ಅದಕ್ಕೆ ಇಂದಿನಿಂದಲೇ ಚಾಲನೆ ನೀಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರಪ್ಪ, ಕೃಷಿ ಇಲಾಖೆ ಅಧಿಕಾರಿಗಳಾದ ಅಶೋಕ್, ಮಾಲತಿ, ಸುನಿತಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತ್ಯಾಗರಾಜ್, ಕಾಂಗ್ರೆಸ್ ಮುಖಂಡರಾದ ಅಪ್ಪಾಜಿಗೌಡ, ಕೆಂಚನಹಳ್ಳಿ ರಾಜು ಹಾಗೂ ಇತರರು ಉಪಸ್ಥಿತರಿದ್ದರು.