ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕಾರ್ಕಳದ ಅಯ್ಯಪ್ಪ ನಗರದ ಬಳಿಯ ಹಾಡಿಯಲ್ಲಿ ಕುಕ್ಕುಂದೂರು ಗ್ರಾಮದ 21ರ ವಯಸ್ಸಿನ ಯುವತಿ ವಾಸವಾಗಿದ್ದು, ಶುಕ್ರವಾರ ಕಾರಿನಲ್ಲಿ ಕರೆದುಕೊಂಡು ಹೋಗಿ, ಬಿಯರ್ಗೆ ಅಮಲು ಪದಾರ್ಥ ಮಿಶ್ರಣ ಮಾಡಿ ಕುಡಿಸಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿಯ ತಾಯಿ ದೂರು ನೀಡಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು ಮೂರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪೈಕಿ ಪ್ರಮುಖ ಆರೋಪಿ ಅಲ್ತಾಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿ ಅಲ್ತಾಫ್ಗೆ ಮದ್ಯವನ್ನು ಪೂರೈಸಿದ್ದ ಇನ್ನೋರ್ವ ಆರೋಪಿ ಸವೇರಾ ರಿಚರ್ಡ್ ಕಾರ್ಡೋಜಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೇನು ಕೃಷಿ ಮಾಡಿಕೊಂಡಿದ್ದ ಯುವತಿಯನ್ನು ಮನೆಯ ಪಕ್ಕದ ರಂಗನಪಲ್ಕೆ ಎಂಬ ಕಾಡು ಪ್ರದೇಶದ ಸ್ಥಳಕ್ಕೆ ಕರೆದೊಯ್ದು ಹಾಡಿಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಮೊದಲು ಯುವತಿಗೆ ಅಮಲು ಪದಾರ್ಥ ನೀಡಿ ಓರ್ವ ಅತ್ಯಾಚಾರ ಎಸಗಿದ್ದು, ನಂತರ ಇನ್ನಿಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಭೋವಿ ಸಮುದಾಯಕ್ಕೆ ಸೇರಿದವರೆಂದು ತಿಳಿದು ಬಂದಿದೆ.
ಆರೋಪಿ ಅಲ್ತಾಫ್ ಹಾಗೂ ಸಂತ್ರಸ್ತ ಯುವತಿ ಮೂರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿರುವುದಾಗಿ ಉಡುಪಿ ಎಸ್ಪಿ ಅರುಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ತಾಫ್ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದು, ಮದುವೆಯಾಗಿದ್ದ ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಓರ್ವ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವ ಎಂದು ಸುದ್ದಿ ಹರಿದಾಡಿದ್ದರಿಂದ ಆಸ್ಪತ್ರೆ ಎದುರು ಸಂಘಪರಿವಾರದ ಕಾರ್ಯಕರ್ತರು, ಭೋವಿ ಸಮುದಾಯದವರು ಜಮಾಯಿಸಿ ಈ ಘಟನೆಯನ್ನು ಖಂಡಿಸಿದ್ದಾರೆ.
ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.