ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ಗೆಲುವು ಸಾಧಿಸಿದೆ.
ಮಂಡ್ಯನಗರಸಭೆಯ 1ನೇ ವಾರ್ಡಿನ ಜೆಡಿಎಸ್ ಸದಸ್ಯ ಪ್ರಕಾಶ್ ( ನಾಗೇಶ್) ಅಧ್ಯಕ್ಷರಾಗಿ, 11ನೇ ವಾರ್ಡಿನ ಬಿಜೆಪಿ ಸದಸ್ಯ ಅರುಣ್ ಕುಮಾರ್ ತಲಾ 19 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ಪ್ರಕಾಶ್ (ನಾಗೇಶ್), ಕಾಂಗ್ರೆಸ್ ನಿಂದ ಹೆಚ್.ಎಸ್.ಮಂಜು ಸ್ಪರ್ಧೆ ಮಾಡಿದರೆ, ಹಿಂದುಳಿದ ಪ್ರವರ್ಗ-1ಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅರುಣ್ ಕುಮಾರ್ ಹಾಗೂ ಕಾಂಗ್ರೆಸ್ ನಿಂದ ಜಾಕೀರ್ ಪಾಷ ಸ್ಪರ್ಧೆ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ತಲಾ 18 ಮತಗಳನ್ನು ಪಡೆದು ಸೋಲನ್ನಪ್ಪಿದರೆ, ಎನ್.ಡಿ.ಎ ಮೈತ್ರಿಕೂಟ ಪ್ರಕಾಶ್ ಹಾಗೂ ಅರುಣ್ ಕುಮಾರ್ ತಲಾ 19 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಸ್ವತಃ ಅಖಾಡಕ್ಕೀಳಿದ ಹೆಚ್.ಡಿ.ಕುಮಾರಸ್ವಾಮಿ
ಒಟ್ಟು 35 ಸದಸ್ಯರ ಬಲದ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ 5 ಪಕ್ಷೇತರ ಸದಸ್ಯರಿದ್ದರು, ಇವರೊಂದಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಮತ ಚಲಾಯಿಸುವ ಹಕ್ಕು ಹೊಂದಿದ್ದು, ಒಟ್ಟಾರೆ ಸಂಖ್ಯಾಬಲ 37ಕ್ಕೇರಿತು. ಸ್ವತಃ ಹೆಚ್.ಡಿ.ಕುಮಾರಸ್ವಾಮಿಯವರ ಅಖಾಡಕ್ಕಿಳಿದಿದ್ದರಿಂದ ನಗರಸಭೆಯು ಎನ್.ಡಿ.ಎ ಒಲಿಯಿತು. ಇಲ್ಲವಾದರೆ ಸಮಬಲಕ್ಕೆ ಕಾರಣವಾಗಿ ಲಾಟರಿ ಮೊರೆ ಹೋಗುವ ಸಾಧ್ಯತೆ ಇತ್ತು. ಕುಮಾರಸ್ವಾಮಿ ಎನ್.ಡಿ.ಎ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ, ಶಾಸಕ ರವಿಕುಮಾರ್ ಗಣಿಗ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಚಲಾಯಿಸಿದರು.
ಎನ್.ಡಿ.ಎ ವಿಜಯೋತ್ಸವ
ನಗರಸಭೆ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಸಾವಿರಾರು ಕಾರ್ಯಕರ್ತರು ನಗರಸಭೆ ಮುಂದೆ ಜಮಾಯಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಹಾಜರಿದ್ದರು.