ಶ್ರೀರಂಗಪಟ್ಟಣ ತಾಲ್ಲೂಕು ಕೆ ಆರ್ ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಣ್ಮರೆಯಾಗಿರುವ ಯುವಕ ರಾಘವೇಂದ್ರ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕುಂಬಾರ ಜಾಗೃತಿ ವೇದಿಕೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ಮಂಡ್ಯದ ನಗರದ ಕಾವೇರಿ ಉದ್ಯಾನವನ ಎದುರು ವೇದಿಕೆ ಕಾರ್ಯಕರ್ತರು ಹಾಗೂ ಸುಗ್ಗನಹಳ್ಳಿ ಗ್ರಾಮಸ್ಥರು ಕೆಲಕಾಲ ಧರಣಿ ನಡೆಸಿ ಮೆರವಣಿಗೆ ಹೊರಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು, ತರುವಾಯ ಜಿಲ್ಲಾಧಿಕಾರಿ ಕಚೇರಿಗೂ ತೆರಳಿದ ಪ್ರತಿಭಟನಾಕಾರರು ನ್ಯಾಯಕೋರಿ ಮನವಿ ಮಾಡಿದರು.
ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಶಿವಕುಮಾರ್ ಪುತ್ರ ರಾಘವೇಂದ್ರ ಕೃಷ್ಣರಾಜಸಾಗರದ ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನು, ರಾತ್ರಿ ವೇಳೆ ಅಲ್ಲೇ ಉಳಿದುಕೊಳ್ಳುತ್ತಿದ್ದ. ಈತ ಆಗಸ್ಟ್ 10 ರಂದು ಕಣ್ಮರೆಯಾಗಿನೆ ಎಂದು ಹೋಟೆಲ್ ಮಾಲೀಕ ಉಮೇಶ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ, ಮಾರನೇ ದಿನ ಕೃಷ್ಣರಾಜಸಾಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದೆವು. ಆದರೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಲು ಮುಂದಾಗಿಲ್ಲ, ಪೊಲೀಸರು ಬಂಧಿಸಿದ ವ್ಯಕ್ತಿಯೊಬ್ಬ ರಾಘವೇಂದ್ರ ಈಜಲು ಹೋಗಿದ್ದಾಗ ಮುಳುಗಿ ಸತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ ಆದರೆ ಮೃತ ದೇಹ ಪತ್ತೆಯಾಗಿರುವುದಿಲ್ಲ ಎಂದು ದೂರಿದರು.
ಪೊಲೀಸರು ವಾಸ್ತವವನ್ನು ಮರೆಮಾಚುತಿದ್ದಾರೆ, ಹೋಟೆಲ್ ಮಾಲೀಕ ಉಮೇಶ್, ಈತನ ಪತ್ನಿ ಹೇಮಲತಾ, ಅಳಿಯ ಹಾಗೂ ಹೋಟೆಲ್ ಕಾರ್ಮಿಕರಾದ ಜಯಮ್ಮ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದರೂ ಸಹ ಇವರನ್ನು ವಿಚಾರಣೆ ಮಾಡಿಲ್ಲ, ರಾಘವೇಂದ್ರ ಬದುಕಿರುವ ಸಾಧ್ಯತೆ ಇಲ್ಲವಾಗಿದ್ದು ಆತನನ್ನು ಹೋಟೆಲ್ ಮಾಲೀಕ ಮತ್ತು ಕುಟುಂಬದವರು ಕೊಲೆ ಮಾಡಿರುವ ಸಾಧ್ಯತೆ ಇದೆ, ಅವರ ವಿರುದ್ಧ ಈ ತಕ್ಷಣ ಎಫ್ ಐ ಆರ್ ದಾಖಲು ಮಾಡಿ, ಬಂಧಿಸಿ, ತನಿಖೆ ನಡೆಸಿ ಯುವಕನ ಮೃತ ದೇಹವನ್ನು ಪತ್ತೆ ಹಚ್ಚಿ ಸತ್ಯಸತ್ಯಾತೆಯನ್ನು ಬಯಲು ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವುದರ ಜೊತೆಗೆ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲ ಬಂಡಿ ಮನವಿ ಸ್ವೀಕರಿಸಿ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಸದಾಗಿ ತನಿಖಾ ಅಧಿಕಾರಿ ನಿಯೋಜಿಸಿ ತನಿಖೆ ನಡೆಸುವ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಲಾಗುವುದೆಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಗೌರವಾಧ್ಯಕ್ಷ ದಾಸ ಶೆಟ್ಟಿ,ಅಧ್ಯಕ್ಷ ಎಂ ಕೃಷ್ಣ, ಮೈಸೂರು ಜಿಲ್ಲಾಧ್ಯಕ್ಷ ಪ್ರಕಾಶ್. ಕೆ ವೆಂಕಟೇಶ್, ಶಾಂತರಾಜು, ಕೆಂಪರಾಜು, ಕುಮಾರ್, ಎಲ್.ಸಂದೇಶ್, ಯುವಕನ ತಂದೆ ಶಿವಕುಮಾರ್, ತಾಯಿ ಗೌರಮ್ಮ ನೇತೃತ್ವ ವಹಿಸಿದ್ದರು.