ಮಂಡ್ಯ ತಾಲೂಕಿನ ಕಾಗೆಹಳ್ಳದದೊಡ್ಡಿ ಗ್ರಾಮದಲ್ಲಿ ಸಾಲಭಾದೆಯಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಗೆಹಳ್ಳದದೊಡ್ಡಿ ನಿವಾಸಿ ಕೆ.ಎಸ್.ಪುಟ್ಟಸ್ವಾಮಿ(55) ಆತ್ಮಹತ್ಯೆ ಮಾಡಿಕೊಂಡ ರೈತ. ತಮಗೆ ಇದ್ದ ಎರಡು ಎಕರೆ ಜಮೀನಿನಲ್ಲಿ ರೇಷ್ಮೆ ಹಾಗೂ ಕಬ್ಬು ಬೆಳೆದಿದ್ದರು. ಈ ಮಧ್ಯ ನೀರಿನ ಕೊರತೆಯಿಂದಾಗಿ ಕಬ್ಬು ಬೆಳೆ ಒಣಗಿ ನಾಶವಾಗಿತ್ತು.
ಕೃಷಿ ವೆಚ್ಚ ಹಾಗೂ ಕುಟುಂಬದ ನಿರ್ವಹಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಮಂಡ್ಯದ ಇಂಡಿಯನ್ ಬ್ಯಾಂಕ್ ನಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು 1.77 ಲಕ್ಷ ರೂ. ಸಾಲ ಪಡೆದಿದ್ದರು. ಕನ್ನಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 66 ಸಾವಿರ ರೂ. ಸಾಲ ಮಾಡಿದ್ದರು.
ಈ ಮಧ್ಯೆ ಬ್ಯಾಂಕಿನ ಸಾಲವನ್ನು ತೀರಿಸಲಾಗದೆ ಸಾಲ ಮೊತ್ತವನ್ನು ರಿನಿವಲ್ ಮಾಡಿಸಿದರು. ಸಾಲದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ತಮ್ಮ ಜಮೀನಿನಲ್ಲೆ ಮಂಗಳವಾರ ಸಂಜೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪುಟ್ಟಸ್ವಾಮಿ ಅವರು ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಂಡು ಕುಟುಂಬದವರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಜಮೀನಿನ ಬಳಿ ತೆರಳಿ ನೋಡಿದಾಗ ಪುಟ್ಟಸ್ವಾಮಿ ಅವರು ಕ್ರಿಮಿನಾಶಕ ಸೇರಿಸಿ ಅಶ್ವತಗೊಂಡಿರುವುದು ಕಂಡುಬಂದಿದೆ.
ತಕ್ಷಣವೇ ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಸುಕಿನ ಜಾವ 2 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.