ಮಂಡ್ಯನಗರದ ಗುತ್ತಲು ಬಡಾವಣೆಯ ದಿನಸಿ ಅಂಗಡಿಯಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದ ಕಳ್ಳರಿಬ್ಬರು 17,000 ರೂ. ನಗದು ದೋಚಿರುವ ಘಟನೆ ಬುಧವಾರ ಮಧ್ಯಾಹ್ನ 2:45 ಸಮಯದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ 2.45 ರ ಸಮಯದಲ್ಲಿ ಮಂಡ್ಯನಗರದ ಗುತ್ತಲು ಬಡಾವಣೆಯ ಅರಕೇಶ್ವರ ಟ್ರೇಡರ್ಸ್ ಗೆ ಈರುಳ್ಳಿ ಖರೀದಿಸುವ ನೆಪದಲ್ಲಿ ಬಂದ ಇಬ್ಬರು ಕಳ್ಳರು ಅಂಗಡಿಯ ಮುಂದೆ ಇಟ್ಟಿದ್ದ ಈರುಳ್ಳಿಯ ಬೆಲೆ ಎಷ್ಟು ಎಂದು ಕೇಳಿದ್ದಾರೆ. ಅಂಗಡಿಯ ಒಳಗೆ ಕುಳಿತಿದ್ದ ಮಾಲೀಕರು ಮುಂದೆ ಬಂದು ಈರುಳ್ಳಿ ಬೆಲೆಯನ್ನು ತಿಳಿಸುತ್ತಿದ್ದಂತೆ, ಒಬ್ಬ ಕಳ್ಳ ಅಂಗಡಿಯ ಒಳಗೆ ಬರುತ್ತಾನೆ.
ಅಷ್ಟರಲ್ಲಿ ಈರುಳ್ಳಿ ಖರೀದಿಸಲು ಮತ್ತಿಬ್ಬರು ಗ್ರಾಹಕರು ಅಂಗಡಿಗೆ ಬಂದ ಸಂದರ್ಭ ಬಳಸಿಕೊಂಡ ಒಳಗಿದ್ದ ಕಳ್ಳ, ಕ್ಯಾಷ್ ಬಾಕ್ಸ್ ತೆಗೆದು ಅದರಲ್ಲಿದ್ದ 17,000 ರೂ. ಹಣವನ್ನು ದೋಚಿ ಮತ್ತೊಬ್ಬನೊಂದಿಗೆ ಕಾಲ್ಕಿತ್ತಿದ್ದಾನೆ. ಕೆಲಕ್ಷಣದಲ್ಲೇ ಅಂಗಡಿಯ ಮಾಲೀಕ ಕ್ಯಾಷ್ ಬಾಕ್ಸ್ ತೆರೆದು ನೋಡಿದಾಗ ಅಲ್ಲಿ ಹಣ ಇಲ್ಲದಿರುವುದು ಕಂಡು ಬಂದಿದೆ. ಮಾಲೀಕ ಹೊರಗೆ ಬಂದು ನೋಡುವಷ್ಟರಲ್ಲಿ ಹಣದೊಂದಿಗೆ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರಿಬ್ಬರ ಮುಖ ಸಿಸಿ ಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಈ ಸಂಬಂಧ ಅಂಗಡಿ ಮಾಲೀಕರು ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.