ಅರವಿಂದ ಪ್ರಭು
ಮಳೆಗಾಲದ ಅಂತ್ಯದಲ್ಲಿರುವ ನಮಗೀಗ ಎಲ್ಲೆಲ್ಲೂ ಹಸಿರು ಕಾಣಿಸುತ್ತಿದೆ. ನಾಲ್ಕು ತಿಂಗಳ ಹಿಂದೆ ಮಳೆ ಯಾವಾಗ ಬರುತ್ತೋ.. ವಿಪರೀತ ಧಗೆ ಅನ್ನುತ್ತಿದ್ದೆವು. ಇತಿಹಾಸದಲ್ಲಿ ಎಂದೂ ದಾಖಲಾಗದ ರಣಬಿಸಿಲನ್ನು ಈ ವರ್ಷ ಅನುಭವಿಸಿದೆವು. ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾದೆವು. ಇದೆಲ್ಲ ಯಾಕಾಗುತ್ತಿದೆ? ಭೂಮಿ ಯಾಕಿಷ್ಟು ಸುಡುತ್ತಿದೆ? ಹಲವು ಬಗೆಯ ಮಾಲಿನ್ಯ ಪರಿಸರ ನಾಶದ ಮೂಲಕ ವಾತಾವರಣವನ್ನು ಅನೇಕ ಬಗೆಯಲ್ಲಿ ಕಲುಷಿತಗೊಳಿಸುತ್ತಿರುವ ನಾವುಗಳು ಭೂಮಿಯ ಸುತ್ತಲೂ ರಕ್ಷಾ ಕವಚದಂತಿರುವ ಓಜೋನ್ ಪದರವನ್ನು ಶಿಥಿಲಗೊಳಿಸಿದ್ದೇವೆ. ಇದರ ಪರಿಣಾಮವೇ ತಾಪಮಾನದ ಏರಿಕೆಗೆ ಕಾರಣ.
ಮನುಷ್ಯ ತನ್ನ ಉಳಿವಿಗಾಗಿ ಗಿಡ ಮರಗಳನ್ನು ಇಂದಾದರೂ ನೆಟ್ಟು ಬೆಳೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅರ್ಥಮಾಡಿಕೊಳ್ಳೋಣ.
ಕಳೆದ 21 ವರ್ಷಗಳಿಂದ ಮಂಡ್ಯದಲ್ಲಿ ನಿರಂತರವಾಗಿ World Ozone Day ಆಚರಿಸುತ್ತಾ ನಮ್ಮ ನಾಳೆಗಳ ಬಗ್ಗೆ ಎಚ್ಚರಿಸುತ್ತಿರುವ ಪರಿಸರ ಸಂಸ್ಥೆಯ ಮಂಗಲ ಯೋಗೀಶ್ ಮತ್ತು ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಎನ್. ದೇವರಾಜು ಇಬ್ಬರೂ ಸೇರಿ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ.
ಎಸ್.ಡಿ. ಜಯರಾಂ ಅವರ ಕನಸಿನ ಶಾಲೆಯ ಕ್ಯಾಂಪಸ್ ಅನ್ನು ಹಸಿರ ತಪ್ಪಲು ಮಾಡುವ ಮೊದಲ ಹೆಜ್ಜೆಯಿದು. ಪ್ರೌಢಶಾಲೆಯ 120 ಮಕ್ಕಳು ತಲಾ ಎರಡೆರೆಡು ಸಸಿಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು, ನಿತ್ಯ ನೀರೆರೆಯಲಿದ್ದಾರೆ. ಕೆಲವು ವರ್ಷಗಳಲ್ಲಿ ಇಲ್ಲೊಂದು ತಂಪಾದ ಪರಿಸರ ನಿರ್ಮಾಣವಾಗಲಿದೆ. ಚಿತ್ರಕೂಟ ಅತ್ಯಂತ ಪ್ರೀತಿಯಿಂದ ಈ ಸಸ್ಯಕ್ರಾಂತಿಯ ಜತೆ ಹೆಜ್ಜೆ ಹಾಕಲು ನಿರ್ಧರಿಸಿದೆ.
ನೀವೂ ಜತೆಯಾಗಿ….