ಮೈಸೂರಿನಿಂದ ಪಾಂಡವಪುರ ಮೂಲಕ ತುಮಕೂರಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರಿಗೆ ಪತ್ರ ಬರೆದಿರುವ ಸಚಿವ ಚಲುವರಾಯಸ್ವಾಮಿ ಅವರು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೋರಿದ್ದಾರೆ.
ಮೈಸೂರಿನಿಂದ ಪಾಂಡವಪುರದವರೆಗೆ ಈಗಾಗಲೇ ದಿನನಿತ್ಯ ಹಲವು ರೈಲುಗಳು ಸಂಚಾರಿಸುತ್ತಿದ್ದು ಅಲ್ಲಿಂದ ಮೇಲುಕೋಟೆ, ನಾಗಮಂಗಲ, ಬಿ.ಜಿ.ನಗರ ಮಾರ್ಗವಾಗಿ ತುಮಕೂರಿಗೆ ಸುಮಾರು 120 ಕಿಮೀ ಹೊಸ ರೈಲು ಮಾರ್ಗಕ್ಕೆ ಅವಕಾಶ ಮಾಡಿಕೊಂಡವಂತೆ ಕೃಷಿ ಸಚಿವರು ಮನವಿ ಮಾಡಿಕೊಂಡಿದ್ದಾರೆ..
ಪಾಂಡವಪುರ ಹಾಗೂ ತುಮಕೂರು ಮಾರ್ಗವಾಗಿ ಮೇಲುಕೋಟೆ, ಹಾಗು ಬಿ.ಜಿ.ನಗರದಂತ ಧಾರ್ಮಿಕ ಸ್ಥಳಗಳು ಬರುವುದರಿಂದ ಸಾವಿರಾರು ಭಕ್ತರು, ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರಿಗೆ ಈ ಹೊಸ ಮಾರ್ಗದಿಂದ ಅನುಕೂಲವಾಗಲಿದೆ.
ನಾಲ್ಕು ಪ್ರಮುಖ ತಾಲೂಕುಗಳು ಈ ಮಾರ್ಗದಲ್ಲಿ ಬರುವುದರಿಂದ ಈ ಭಾಗದ ತಾಲೂಕಿನ ಸಾರ್ವಜನಿಕರಿಗೆ ಹೊಸ ರೈಲು ಮಾರ್ಗದ ಪ್ರಯೋಜನ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.