ಒಕ್ಕಲಿಗ ಜನಾಂಗದ ಪ್ರತಿನಿಧಿಯಾಗಿ ಡಿಕೆ ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡೋಣ, ಡಿಕೆ ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟ್ ಗೆದ್ದಿದೆ. ಮದ್ದೂರಿನಲ್ಲಿ ಕಾರ್ಯಕರ್ತರು ಬಲಿಷ್ಟರಾಗುತ್ತಿದ್ದಾರೆ. ಹೊಸ ಅಧ್ಯಕ್ಷರ ನೇಮಕವಾಗಿದೆ, ಒಬ್ಬರ ಕಾಲನ್ನ ಮತ್ತೊಬ್ಬರು ಎಳೆಯುವುದನ್ನು ಬಿಟ್ಟು ಮುಂಬರುವ ಜಿ.ಪಂ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಸಜ್ಜಾಗಬೇಕೆಂದು ಶಾಸಕ ಕದಲೂರು ಉದಯ್ ಕಿವಿಮಾತು ಹೇಳಿದರು.
ಮದ್ದೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಕಷ್ಟದಲ್ಲಿ ಸಿಲುಕಿದ್ದರು. ಇಬ್ಬರ ಜಗಳದಲ್ಲಿ ಕಾರ್ಯಕರ್ತರು ಸಿಕ್ಕಿ ನಲುಗಿದ್ದರು, ಆದರೆ ಈಗ ಮದ್ದೂರಿನಲ್ಲಿ ಅಂತಹ ವಾತಾವರಣ ಇಲ್ಲವೆಂದರು.
2028 ಕ್ಕೆ 138 ಸೀಟ್ ಗೆಲ್ಲಬೇಕು. ಪುನಃ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸಬೇಕು. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗ್ತಾರೆ. ಒಕ್ಕಲಿಗರೆಲ್ಲ ಸೇರಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡೋಣ, ಒಗ್ಗಟ್ಟಿನಿಂದ ನಾವೆಲ್ಲರೂ ದುಡಿಯೋಣ ಪಕ್ಷ ಬಲಿಷ್ಟಗೊಳಿಸೋಣ ಎಂದು ಸ್ಪೂರ್ತಿ ತುಂಬಿದರು.
ನಮ್ಮ ಕಾರ್ಯಕರ್ತರ ಶಕ್ತಿ ಗೊತ್ತಿದೆ, ಮುಂಬರುವ ಚುನಾವಣೆಯಲ್ಲಿ ನಿಮ್ಮ ಒಗ್ಗಟ್ಟು ಹೀಗೆ ಮುಂದುವರಿಯಬೇಕು, ಹಿಂದಿ ಚುನಾವಣೆಗಳಲ್ಲಿ ಮಾರ್ಗದರ್ಶನ, ಅರ್ಥಿಕವಾಗಿ ಸಹಾಯ ಮಾಡುವವರು ಇರಲಿಲ್ಲ. ನಿಮ್ಮ ಜೊತೆ ನಾವೀದ್ದೇವೆ. ಮದ್ದೂರಿನ ಬಗ್ಗೆ ಡಿಕೆ ಶಿವಕುಮಾರ್ ವಿಶೇಷ ಕಾಳಜಿ ತೋರುತ್ತಾರೆ. ಎಲ್ಲಾ ಚುನಾವಣೆಯಲ್ಲಿ ನಾವೇ ಗೆಲ್ಲಬೇಕು ಅದಕ್ಕೆ ತಕ್ಕ ಸಂಘಟನೆ ಅಗತ್ಯವೆಂದರು.
ಅಭಿವೃದ್ದಿ, ಸಂಘಟನೆಗೆ ಉದಯ್ ಆದ್ಯತೆ
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಿದೆ. ಮದ್ದೂರಿನಲ್ಲಿ ಸ್ವಂತ ಕಾಂಗ್ರೆಸ್ ಕಟ್ಟಡ ನಿರ್ಮಾಣವಾಗಬೇಕು. ಯುವಕರು ಮುಂದಾಗಿ ಈ ಕಾರ್ಯಕ್ಕೆ ತೊಡಗಬೇಕು, 1999 ರಿಂದ ಮದ್ದೂರು ಕ್ಷೇತ್ರದಲ್ಲಿ ಕದಲೂರು ರಾಮಕೃಷ್ಣ ಕಾಂಗ್ರೆಸ್ ಕಟ್ಟಿದ್ದಾರೆ.
ಉದಯ್ ಅವರು ಇದೀಗ ಪಕ್ಷ ಕಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಅಭಿವೃದ್ಧಿಗೆ 400 ಕೋಟಿ ಅನುದಾನ ತಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿದೆ, ನುಡಿದಂತೆ ನಡೆದು ಜನರ ಸೇವೆ ಮಾಡ್ತಿದ್ದಾರೆ. ಮಹಿಳೆಯರು 8 ಕೋಟಿ 30 ಲಕ್ಷ ಬಾರಿ ಉಚಿತ ಪ್ರಯಾಣ ಮಾಡಿ, 200 ಕೋಟಿ ಹಣ ವ್ಯಯವಾಗಿದೆ. ಮಹಿಳೆಯರಿಗೆ 2 ಸಾವಿರ ಹಣ ಹಾಕ್ತಿದೆ. ಅನ್ನಭಾಗ್ಯ ಯೋಜನೆಯಡಿ 4 ಲಕ್ಷ 63 ಸಾವಿರ ಕಾರ್ಡ್ ಗೆ ಹಣ ನೀಡಲಾಗುತ್ತಿದೆ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ತೈಲೂರು ಚಲುವರಾಜು ಹಾಗೂ ಅಣ್ಣೂರು ರಾಜೀವ್ ನಿರ್ಗಮಿತ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರಿಂದ ಅಧಿಕಾರ ಸ್ವೀಕರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಸವರಾಜು, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್ ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಎನ್.ಡಿ.ಮಹಾಲಿಂಗಯ್ಯ, ಇಂಮ್ತಿಯಾಜ್ ಉಲ್ಲಾಖಾನ್, ಮೋಹನ್ ಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿರಿದ್ದರು.