ಬಿಹಾರದ ನವಾಡ ಜಿಲ್ಲೆಯಲ್ಲಿ ಸುಮಾರು 100 ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಪೊಲೀಸರು 21 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ಬುಧವಾರ ಸಂಜೆ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಂಝಿ ತೋಲಾ ಎಂಬಲ್ಲಿ ನಡೆದಿದ್ದು, ಇದಕ್ಕೆ ಜಮೀನು ವಿವಾದವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 7.30 ರ ಸುಮಾರಿಗೆ ಮಾಂಝಿ ಟೋಲಾದಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಕರೆ ಬಂದಿತು. ಪೊಲೀಸರು ತಕ್ಷಣ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಸ್ವಲ್ಪ ಸಮಯದಲ್ಲಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ವರದಿಯಾಗಿದೆ.
ಜನರ ಗುಂಪು ಮನೆಗಳನ್ನು ಸುಟ್ಟು ಹಾಕಲು ಪ್ರಾರಂಭಿಸಿದ್ದು, ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಎಸ್ಪಿ ಅಭಿನವ್ ಧಿಮಾನ್ ಅವರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ವರದಿಗಳು ಹೇಳಿವೆ. “ಘಟನೆಗೆ ಜಮೀನು ವಿವಾದವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಮನೆಗಳಿಗೆ ಬೆಂಕಿ ಹಚ್ಚುವಾಗ ಗಾಳಿಯಲ್ಲಿ ಗುಂಡು ಹಾರಿಸಲಾಯಿತು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಹಿಂಸಾಚಾರ ನಡೆಯದಂತೆ ತಡೆಯಲು ಹೆಚ್ಚಿನ ಪೊಲೀಸ್ ತುಕಡಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಧೀಮಾನ್ ಹೇಳಿದ್ದಾರೆ.
ನವಾಡದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಎನ್ಡಿಎ ಸರಕಾರವನ್ನು ಗುರುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಇದು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಜಂಗಲ್ ರಾಜ್ಗೆ ಮತ್ತೊಂದು ಪುರಾವೆ ಇದಾಗಿದೆ. ದಲಿತರು ಮತ್ತು ವಂಚಿತರ ಬಗ್ಗೆ ಸರ್ಕಾರ “ಅತ್ಯಂತ ಅಸಡ್ಡೆ”ಯಿಂದ ವರ್ತಿಸುತ್ತಿದೆ ಎಂದು ಹೇಳಿದೆ.
ನವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿದ್ದು, ಆದರೆ ಪೊಲೀಸರು 21 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
ಬಿಹಾರದ ನಾವಡಾದಲ್ಲಿ ಮಹಾದಲಿತ್ ತೋಲಾ ಮೇಲೆ ಗೂಂಡಾಗಳ ಭಯೋತ್ಪಾದನೆ ಎನ್ಡಿಎ ಡಬಲ್ ಎಂಜಿನ್ ಸರ್ಕಾರದ ಜಂಗಲ್ ರಾಜ್ಗೆ ಮತ್ತೊಂದು ಪುರಾವೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 100 ದಲಿತರ ಮನೆಗಳಿಗೆ ಬೆಂಕಿ ಹಚ್ಚಿ, ಗುಂಡು ಹಾರಿಸಿ, ರಾತ್ರಿಯ ಕತ್ತಲಲ್ಲಿ ಬಡ ಕುಟುಂಬಗಳ ಎಲ್ಲವನ್ನೂ ಕಿತ್ತುಕೊಂಡಿರುವುದು ಖಂಡನೀಯ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
ದಲಿತರ ಬಗ್ಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ “ಅತ್ಯಂತ ಅಸಡ್ಡೆ” ಮತ್ತು ವಂಚಿತ ಸಮುದಾಯದ ಬಗ್ಗೆ “ನಿರ್ಲಕ್ಷ್ಯ” ತೋರುವುದು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿರುವುದು ಈಗ ಉತ್ತುಂಗದಲ್ಲಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಮೌನವಾಗಿದ್ದು, ನಿತೀರ್ ಕುಮಾರ್ ಅಧಿಕಾರದ ದುರಾಸೆಯಲ್ಲಿ ನಿರಾತಂಕರಾಗಿದ್ದಾರೆ. ಎನ್ಡಿಎ ಮಿತ್ರಪಕ್ಷಗಳು ಮೌನವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಹಾರದ ನವಾಡದಲ್ಲಿ 80ಕ್ಕೂ ಹೆಚ್ಚು ಮಹಾದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಅತ್ಯಂತ ಭಯಾನಕ ಮತ್ತು ಖಂಡನೀಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. “ಡಜನ್ ಗಟ್ಟಲೆ ಸುತ್ತು ಗುಂಡು ಹಾರಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಮತ್ತು ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದನ್ನು ತೋರಿಸುತ್ತದೆ” ಎಂದು ಅವರು ಎಕ್ಸ್ನಲ್ಲಿ ಹೇಳಿದ್ದಾರೆ.