ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ಮಾನಸಿಕ,ದೈಹಿಕ ಕಿರುಕುಳ ತಡೆಗಟ್ಟಿ ಬೇಕು ಮತ್ತು ಸಂಸ್ಥೆ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಒತ್ತಾಯಿಸಿಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದ ಜನವರಿ ಮಹಿಳಾ ಸಂಘಟನೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ಕಿರುಕುಳದಿಂದ ಮಳವಳ್ಳಿ ತಾಲೂಕು ಮಲಿಯೂರು ಗ್ರಾಮದ ಮಹಾಲಕ್ಷ್ಮಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಮತ್ತು ಇವರೆಲ್ಲರ ಸಾಲಗಳನ್ನು ಮನ್ನಾ ಮಾಡಬೇಕು ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಆಗ್ರಹಿಸಿದರು.
ಬಡತನವನ್ನೇ ಬಂಡವಾಳ ಮಾಡಿಕೊಂಡ ಧರ್ಮಸ್ಥಳ ಸಂಸ್ಥೆ
ಸ್ವ ಸಹಾಯ ಸಂಘಗಳ ರಚಿಸಿಕೊಂಡಿರುವ ಮಹಿಳೆಯರ ಬಡತನವನ್ನೇ ಬಂಡವಾಳ ಮಾಡಿಕೊಂಡ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಇತರೆ MFI ಸಂಸ್ಥೆಗಳು ಪೈಪೋಟಿ ಮೇಲೆ ಸಾಲ ನೀಡಿ ದುಬಾರಿ ಬಡ್ಡಿ ವಿಧಿಸಿ, ಪ್ರತಿವಾರ ಮತ್ತು 15 ದಿನಕ್ಕೊಮ್ಮೆ ಸಾಲ ಮರುಪಾವತಿ ಮಾಡಲು ನಿರ್ಬಂಧಗಳನ್ನು ಹೇರುತ್ತಾರೆ ಮತ್ತು ಪ್ರತಿ ಸಾಲಗಾರರಿಗೆ ಸ್ಥಳೀಯ ವ್ಯಕ್ತಿಗಳನ್ನೆ ಜಾಮೀನು ಪಡೆದುಕೊಂಡು ಅವರವರ ನಡುವೆ ಜಗಳ ತಂದೊಡ್ಡುವ ತಂತ್ರ ರೂಪಿಸುತ್ತಾರೆ. ಅಲ್ಲದೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಕ್ರೋಫೈನಾನ್ಸ್ನ ಪುರುಷ ನೌಕರರು ವಸೂಲಾತಿಗೆ ಮುಂಜಾನೆ ಎದ್ದೇಳುವ ಮುನ್ನ ಮನೆ ಬಾಗಿಲಿಗೆ ಬಂದು ಮನೆ ಪ್ರವೇಶಿಸಿದರೆ ಸಂಜೆಯಾದರೂ ಮನೆಯಿಂದ ಹೊರಕ್ಕೆ ಹೋಗಲು ಬಿಡುವುದಿಲ್ಲ. ಕೂಲಿಗೂ ಹೋಗಲು ಬಿಡುವುದಿಲ್ಲ ಎಂದು ವಿವರಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಬಡ್ಡಿ ರಹಿತ ಧೀರ್ಘಾವಧಿ ಸಾಲ ನೀಡಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲದೆ ದೊಡ್ಡ, ದೊಡ್ಡ ಉದ್ಯಮಪತಿಗಳಿಗೆ ನರೇಂದ್ರ ಮೋದಿ ಸರಕಾರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಬಡರೈತರ, ಕೂಲಿಕಾರರ, ಮಹಿಳೆಯರ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡುತ್ತಿಲ್ಲ. ಸ್ವ ಉದ್ಯೋಗ, ಜಾನುವಾರು ಸಾಕಾಣಿಕೆ, ವ್ಯಾಪಾರ ವಹಿವಾಟಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಬ್ಸಿಡಿ ದರದಲ್ಲಿ ಸಾಲ ವಿತರಿಸಿ, ಮಹಿಳೆಯರ ಆರ್ಥಿಕವಾಗಿ ಸಬಲೀಕರಣ ಮಾಡಬೇಕಾಗಿದ್ದು ಅದನ್ನು ಮಾಡಲು ಮುಂದಾಗುತ್ತಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿಂಸೆ ಮತ್ತು ಸಾಲ ತೀರಿಸಲಾಗದೇ ಹಲವಾರು ಗ್ರಾಮಗಳ ಮಹಿಳೆಯರು ಗ್ರಾಮ ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇವುಗಳನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಸುಶೀಲ ಹಾಗೂ ತಾಲೂಕು ಅಧ್ಯಕ್ಷೆ ಮಂಜುಳ ಉಪಸ್ಥಿತರಿದ್ದರು.