ಅಖಿಲ ಭಾರತ ಕೊಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ ಗುಲ್ಬರ್ಗದಲ್ಲಿ ಸೆಪ್ಟೆಂಬರ್ 29 ಮತ್ತು 30ರಂದು ನಡೆಯಲಿದೆ ಎಂದು ಕರ್ನಾಟಕ ಕೊಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ .ಎಲ್. ಭರತರಾಜ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದಲ್ಲಿ ಉತ್ತರ ಪ್ರದೇಶ ,ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯ ಪ್ರದೇಶ ,ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು, ಬಿಹಾರ ,ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಮುಖಂಡರು ಭಾಗವಹಿಸಲಿದ್ದಾರೆ. ಅಲ್ಲದೆ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಡಿ ರವೀಂದ್ರನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಶುಕ್ಲಾ, ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ವಿಜು ಕೃಷ್ಣನ್ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರ್ಕಾರ ಟನ್ ಕಬ್ಬಿಗೆ 5000 ಬೆಲೆ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿದೆ . ಅದೇ ರೀತಿ ರಾಜ್ಯ ಸರ್ಕಾರ ಸಕ್ಕರೆ ಕಂಪನಿ, ಮಾಲೀಕರ ಮುಲಾಜಿನಲ್ಲಿ ನಡೆಯುತ್ತಿದೆ ಎಂದು ದೂರಿದರು. ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಳಜಿ ಇದ್ದರೆ ಪ್ರತಿ ಟನ್ ಕಬ್ಬಿಗೆ 5000 ರೂಪಾಯಿ ಎಫ್ ಆರ್ ಪಿ ನಿಗದಿ ಮಾಡಬೇಕಿತ್ತು. ಆದರೆ ನಿಗದಿ ಮಾಡದೆ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1994 -95 ರಲ್ಲಿ ಕಬ್ಬಿಗೆ ಬೆಲೆ ನಿಗದಿಪಡಿಸುವಾಗ ಶೇಕಡ 8.5 ಇಳುವರಿಯ ಮಾನದಂಡ ಇಟ್ಟುಕೊಂಡು ಬೆಲೆ ನಿಗದಿ ಮಾಡುತ್ತಿದ್ದರು. ನಂತರ ಶೇಕಡ 9.5 ಇಳುವರಿಯ ಆಧಾರದಲ್ಲಿ ಬೆಲೆ ನಿಗದಿ ಮಾಡಿದ್ದಾರೆ. ತದನಂತರ ಸಕ್ಕರೆ ಉದ್ಯಮ ಪತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಪ್ರಬಲರಾದಂತೆ ಎಫ್ ಆರ್ ಪಿ ನಿಗದಿಪಡಿಸಲು ಇಳುವರಿಯ ಮಾನದಂಡವನ್ನು ಶೇಕಡ 10.25 ತಂದಿದ್ದು ಇದು ಕಬ್ಬು ಬೆಳೆಗಾರರಿಗೆ ಮಾಡಿದ ಮಹಾ ದ್ರೋಹವಾಗಿದೆ ಎಂದರು.
ಎಂ.ಎಸ್ .ಸ್ವಾಮಿನಾಥನ್ ಆಯೋಗದ ವರದಿಯಂತೆ 50ರಷ್ಟು ಲಾಭಾಂಶ ಸೇರಿಸಿ ಎಫ್ ಆರ್ ಪಿ ನಿಗದಿ ಮಾಡಿದರೆ ಪ್ರತಿ ಟನ್ ಕಬ್ಬಿಗೆ 5370 ರೂಪಾಯಿಗಳಾಗುತ್ತದೆ .ಆದರೆ ಕೇಂದ್ರ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಗುಲ್ಬರ್ಗದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು .ಆದ್ದರಿಂದ ಕಬ್ಬು ಬೆಳೆಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಬ್ಬು ಬೆಳೆಗಾರರಾದ ಕುಳ್ಳೇಗೌಡ, ಕೆಂಪರಾಜು ,ರಾಮಕೃಷ್ಣಪ್ಪ, ಜಯಸ್ವಾಮಿ, ಉಮಾಪತಿ, ಶಿವರಾಮು, ಶುಕುರ್ ,ಶ್ರೀನಿವಾಸ್ ಉಪಸ್ಥಿತರಿದ್ದರು.