ಬುದ್ಧ ಭಾರತ ಫೌಂಡೇಶನ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಸಕ್ಷಮ ಪ್ರಾಧಿಕಾರಗಳ ಸಹಯೋಗದಲ್ಲಿ ಅಕ್ಟೋಬರ್ 14ರಂದು ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗಾರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 14ರಂದು ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆ ಪಡೆದ ದಿನವಾಗಿದೆ. ಹಾಗಾಗಿ ಈ ದಿನದ ನೆನಪಿಗಾಗಿ ಬುದ್ಧ ಧಮ್ಮವನ್ನು ಪ್ರತಿ ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಜೊತೆಗೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ವಧು-ವರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಧು ವರರು ವಯಸ್ಕರಾಗಿದ್ದು ಮತ್ತು ಯಾವುದೇ ಜಾತಿ ಸಮುದಾಯದ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದರು.
ವಿವಾಹವಾಗಲು ಇಚ್ಚಿಸುವವರು ಆಧಾರ್ ಕಾರ್ಡ್, ವಯಸ್ಸಿನ ದೃಢೀಕರಣ ಪತ್ರ ,ಇತ್ತೀಚಿನ ಮೂರು ಭಾವಚಿತ್ರ ,ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಅಕ್ಟೋಬರ್ 10ರವರೆಗೆ ಬುದ್ಧ ಭಾರತ ಫೌಂಡೇಶನ್ ಸುಂದರಪ್ಪ ಬಿಲ್ಡಿಂಗ್, ಸುಭಾಷ್ ನಗರ, 8ನೇ ಕ್ರಾಸ್ ಮಂಡ್ಯ 571 401 ಇಲ್ಲಿಗೆ ತಲುಪಿಸಿ ಹೆಸರು ನೋಂದಾಯಿಸಿಕೊಳ್ಳಬಹುದು, ಹೆಚ್ಚಿನ ವಿವರಗಳಿಗಾಗಿ 9008367515 ಹಾಗೂ 9481776715 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಫೌಂಡೇಶನ್ ಅಧ್ಯಕ್ಷ ಜೆ ರಾಮಯ್ಯ, ಅಹಿಂದ ಸಂಘಟನೆಯ ಲೋಕೇಶ್, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ ,ಜವರಪ್ಪ ,ಶುಭಾಷ್, ಗುರುವಣ್ಣ ,ರಾಜಣ್ಣ ಉಪಸ್ಥಿತರಿದ್ದರು.