ಸರ್ವೋಚ್ಚ ನ್ಯಾಯಾಲಯ ಒಳಮೀಸಲಾತಿಗೆ ಸಂಬಂಧಿಸಿದಂತೆ ಆದೇಶ ಮಾಡಿದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಮೊಕದ್ದಮೆ ದಾಖಲಿಸುವುದಾಗಿ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಎಸ್ ಅರುಣ್ ಕುಮಾರ್ ಎಚ್ಚರಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರ ನೇತೃತ್ವದಲ್ಲಿ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಡುವಿನ ವಿವಿಧ ಹಂತಗಳ ತಾರತಮ್ಯವನ್ನು ಪರಿಹರಿಸಲು ಉಪ ವರ್ಗೀಕರಣವನ್ನು ಅನುಮೋದಿಸಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗಗಳನ್ನು ಮಾಡಲು ರಾಜ್ಯಗಳಿಗೆ ಅಧಿಕಾರವಿದೆ. ಹಿಂದುಳಿದ ಜಾತಿಗಳನ್ನು ಉನ್ನತೀಕರಿಸಲು ಮೀಸಲು ವರ್ಗದೊಳಗೆ ಕೋಟಗಳನ್ನು ನೀಡಲು ಪರಿಶಿಷ್ಟ ಜಾತಿ ಏಕರೂಪದ ಗುಂಪು ಮತ್ತು ಎಸ್ ಸಿ ,ಎಸ್ ಟಿ ಗಳಲ್ಲಿ ತಾರತಮ್ಯಗಳನ್ನು ಅನುಭವಿಸಿದವರಿಗೆ ಶೇಕಡ 15ರಷ್ಟು ಮೀಸಲಾತಿಯಲ್ಲಿ ಹೆಚ್ಚಿನ ತೂಕವನ್ನು ನೀಡಲು ರಾಜ್ಯ ಸರ್ಕಾರಗಳು ಅವರನ್ನು ವರ್ಗೀಕರಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ .ಆದಕಾರಣ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ವಕೀಲ ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಕೂಡಲೇ ಸಂಪುಟ ಸಭೆ ಕರೆದು ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲವೇ ಸಾಮಾಜಿಕ ನ್ಯಾಯ ನೀಡುವ ಬಗ್ಗೆ ವಂಚನೆ ಮಾಡಿದಲ್ಲಿ ಅವರ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ವಕೀಲರಾದ ರಾಜೇಂದ್ರ ,ದಾಸಯ್ಯ ಉಪಸ್ಥಿತರಿದ್ದರು.