ಕೆ.ಆರ್.ಎಸ್ ನಲ್ಲಿ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿ ಕಾರ್ಯಕ್ರಮವನ್ನು ಕೈಬಿಟ್ಟು, ಅದರ ಬದಲು ಬಸವಣ್ಣನವರ ವಚನಗಳನ್ನು ಪಸರಿಸಲು ಕಾರ್ಯಕ್ರಮ ಆಯೋಜಿಸಬೇಕೆಂದು ಮಳವಳ್ಳಿ ತಾಲ್ಲೂಕು ಆಡಳಿತವನ್ನು ‘ನಾವು ದ್ರಾವಿಡ ಕನ್ನಡಗರು’ ಸಂಘಟನೆ ಮುಖಂಡರು ಆಗ್ರಹಿಸಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಇಂಡಿಯಾ ಒಕ್ಕೂಟದ ಹಿಂದುಳಿದ ರಾಜ್ಯಗಳಾದ ಉತ್ತರಖಂಡ , ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರಿನಲ್ಲಿ ಕೊಳಕು ಹೆಚ್ಚಿಸುವ ಗಂಗಾರತಿ ಕಾರ್ಯಕ್ರಮ ನೋಡಿಕೊಂಡು ಬಂದು ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವುದನ್ನು ಪತ್ರಿಕೆಗಳಲ್ಲಿ ನೋಡಿ ಆಘಾತವಾಗಿದೆ, ಅಂತಹ ಕಾರ್ಯಕ್ರಮವನ್ನು ಮಂಡ್ಯದಲ್ಲಿ ನಡೆಸುವುದನ್ನು ಕೈಬಿಡಬೇಕೆಂದು ಮನವಿ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ವಿಶ್ವ ಮಾನವ ಕುವೆಂಪು ಅವರು ಹೇಳಿದಂತೆ, “ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?, “ಗಂಗಾ ಮಾತ್ರ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಪವಿತ್ರ ಅಲ್ಲವೇ?” ಎಂಬ ಸಾಲುಗಳನ್ನು ಉಲ್ಲೇಖಿಸಿರುವ ದ್ರಾವಿಡ ಕನ್ನಡಿಗರು, ಈಗಾಗಲೇ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆಯಿಂದ ಕನ್ನಡನಾಡು ನುಡಿ ಆಚರಣೆಗಳಿಗೆ ಅವಕಾಶ ಕೊಡದೆ, ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಈಗಿವಾಗ, ಕರ್ನಾಟಕ ಸರ್ಕಾರ ಕೂಡ ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗಿದೆ, ಹಾಗಾಗಿ ಕಾವೇರಿ ಆರತಿ ಕೈ ಬಿಡಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದರ್ಶನ್, ಬಸವರಾಜ ನಾಯಕ ಹಾಗೂ ಮನುಗೌಡ ಉಪಸ್ಥಿತರಿದ್ದರು.