ಶ್ರೀರಂಗಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದಿಂದ ಎಂ.ಬಿ.ಕುಮಾರ್ ಅವರನ್ನು ತೆರವುಗೊಳಿಸಿ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ ಜೋಶಿ ಆದೇಶ ಹೊರಡಿಸಿದ್ದಾರೆ.
ಎಂ.ಬಿ.ಕುಮಾರ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮಂಡ್ಯ ಪರ್ತಕರ್ತರು ಜೋಶಿಯವರು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಎಂ.ಬಿ.ಕುಮಾರ್ ಅವರನ್ನು ತೆರವುಗೊಳಿಸಲಾಗಿದೆ.
ಡಿಸೆಂಬರ್ ೨೦, ೨೧ ಮತ್ತು ೨೨ರಂದು ಮಂಡ್ಯದಲ್ಲಿ ಜರುಗತ್ತಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದ ಕುಮಾರ್ ಎಂ.ಬಿ. ಆದ ತಾವು ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆಗಾಗಿ ಕಳಿಸಿರುವ “ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರ ವಿವರಗಳ ಅರ್ಜಿ ನಮೂನೆ” ಕ್ರ.ಸಂ.೧೩ರಲ್ಲಿ ತಮ್ಮ ವಿರುದ್ಧ ಯಾವುದೇ ಅಪರಾಧದ ಮೊಕದ್ದಮೆ ಇಲ್ಲವೆಂದು ಸುಳ್ಳು ಮತ್ತು ದಾರಿ ತಪ್ಪಿಸುವಂತಹ ಮಾಹಿತಿ ನೀಡಿದ್ದು, ಈ ಮಾಹಿತಿ / ಘೋಷಣೆ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ಹಾಗೂ ಧೈಯೋದ್ದೇಶಗಳಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷರ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.