ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಕ್ಷೇಮಭಿವೃದ್ಧಿ ನೇರ ಪಾವತಿ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಡ್ರೈವರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಹಾಗೆಯೇ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಗಳನ್ನು ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಅಕಾಲಿಕವಾಗಿ ಮೃತಪಟ್ಟಾಗ ಅಥವಾ ವಯೋ ನಿವೃತ್ತಿ ಹೊಂದಿದಾಗ ಅವರ ಕುಟುಂಬಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತುಷಾರ ಮಣಿ ಅವರು ಕಾರ್ಮಿಕರ ಸಂಕಷ್ಟ ನಿಧಿ ಸ್ಥಾಪಿಸಿ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.
ತಮ್ಮ ಪೋಷಕರ ಜ್ಞಾಪಕಾರ್ಥವಾಗಿ ಶ್ರೀಮತಿ ಶಕುಂತಲ ವೀರಪ್ಪ ಕಾರ್ಮಿಕರ ಸಂಕಷ್ಟ ನಿಧಿಯನ್ನು ಸ್ಥಾಪಿಸಲು 2 ಲಕ್ಷ ದೇಣಿಗೆಯನ್ನು ಮಂಡ್ಯ ನಗರಸಭೆಗೆ ಹಸ್ತಾಂತರಿಸಿದ್ದಾರೆ. ಈ ಮೊತ್ತವನ್ನು ಶ್ರೀಮತಿ ಶಕುಂತಲಾ ವೀರಪ್ಪ ಕಾರ್ಮಿಕರ ಸಂಕಷ್ಟ ನಿಧಿ ಎಂಬ ಹೆಸರಿನ ಬ್ಯಾಂಕಿನ ಖಾತೆಯನ್ನು ತೆರೆದು ಅದರ ನಿರ್ವಹಣೆಯನ್ನು ಮಾಡಲು ಪೌರಾಯುಕ್ತರಲ್ಲಿ ಕೋರಿದ್ದಾರೆ.
ಮಂಡ್ಯ ನಗರಸಭೆಯಲ್ಲಿ ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಕ್ಷೇಮಾಭಿವೃದ್ಧಿ ನೇರಪಾವತಿ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ರೂ 50,000 (ಐವತ್ತು ಸಾವಿರ)ಗಳನ್ನು ಕೂಡಲೇ ನೀಡಲು ಈ ನಿಧಿ ಸಹಾಯಕವಾಗಲಿದೆ ಹಾಗೂ ನಿವೃತ್ತಿ ಹೊಂದಿದ ಸಂದರ್ಭದಲ್ಲಿ 25,000 ಇಪ್ಪತೈದು ಸಾವಿರ ರೂ ಗಳನ್ನು ನೀಡಲು ಸಹಾಯಕವಾಗಲಿದೆ. ಈ ನಿಧಿಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯು ಪೌರಯುಕ್ತರದಾಗಿರುತ್ತದೆ.
ಕಾರ್ಮಿಕರ ನೆರವಿಗಾಗಿ ನಿಧಿ ಸ್ಥಾಪಿಸಿರುವ ತುಷಾರ ಮಣಿ ಅವರನ್ನು ಮಂಡ್ಯ ನಗರಸಭೆಯ ಪೌರಕಾರ್ಮಿಕರಾದ ಗಣೇಶ, ಕೆ ಮಹೇಂದ್ರ, ಎಂ.ನಾಗರಾಜ್, ಮಹದೇವ (ಗುಂಡ), ಶಿವಕುಮಾರ, ಎಸ್ ಗಣೇಶ, ಎಂ ಮಧುಸೂದನ್, ಓಬಯ್ಯ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.