ಕಾರಂತರು ತಮ್ಮ ಜೀವಿತದಲ್ಲಿ ಉದ್ದಕ್ಕೂ ನಡೆಸಿಕೊಂಡು ಬಂದ ಎರಡು ಕೆಲಸಗಳೆಂದರೆ ಪರಿಸರ ಸಂರಕ್ಷಣೆಯ ಬಗೆಗಿನ ಹೋರಾಟ ಮತ್ತು ವೈಚಾರಿಕ, ವೈಜ್ಞಾನಿಕ ಮನೋಭಾವದ ಬರವಣಿಗೆ.
ಬದುಕನ್ನು ಸರಿಯಾಗಿ ಸಫಲವಾಗಿ ಬಾಳಲು ಹತ್ತಾರು ಬಗೆಯ ತಿಳಿವು ಅಗತ್ಯ ಎಂಬುದು ಕಾರಂತರ ನಂಬಿಕೆ. ಅವರ ಬದುಕಿನ ರೀತಿ ತುಂಬ ಕಟ್ಟುನಿಟ್ಟಿನದು. ಬೆಳಗ್ಗೆ ಏಳುವುದು ಇಷ್ಟು ಗಂಟೆಗೆ ಎಂದರೆ ಹಾಗೆಯೇ ಆಗಬೇಕು. ಮುಂಜಾನೆ 5 ಗಂಟೆಗೆ ಏಳುತ್ತಿದ್ದರು. ನಾಲ್ಕೂ ಮುಕ್ಕಾಲಿಗೆ ಎಚ್ಚರಾದರೆ ಮಲಗಿದರೆ ಐದು ದಾಟಬಹುದೆಂದು ಅವರು ಮಲಗುತ್ತಿರಲಿಲ್ಲ.
ಪೂರ್ಣಚಂದ್ರ ತೇಜಸ್ವಿ ಅವರು ಒಮ್ಮೆ ತಾನು ತುಂಬ ಗೌರವದಿಂದ ಕಾಣುವ ಇಬ್ಬರು ಕನ್ನಡ ಸಾಹಿತಿಗಳನ್ನು ಹೆಸರಿಸಿ ಅದಕ್ಕೆ ಕಾರಣ ನೀಡಿದ್ದರು. ಶಿವರಾಮ ಕಾರಂತರ ಪ್ರಯೋಗಶೀಲತೆ ಮತ್ತು ಕುವೆಂಪು ಅವರ ಕಲಾತ್ಮಕತೆ ತಮಗಿಷ್ಟ ಎಂದು ಅವರು ಹೇಳಿದ್ದರು.
ಕಾರಂತರು ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಜೀವನದಲ್ಲೇ ಪ್ರಯೋಗಶೀಲತೆಯನ್ನು ಮೆರೆದವರು. ಅವರು ಕಾಲೇಜು ಮೆಟ್ಟಿಲನ್ನು ತುಳಿಯಲಿಲ್ಲ. ದೇಶ ಸುತ್ತಿದರು; ಕೋಶ ಓದಿದರು. ಯಾವುದೇ ಉದ್ಯೋಗ, ಸಂಪಾದನೆಯ ಮೂಲಕ್ಕೆ ಅಂಟಿಕೊಳ್ಳದೆ ಸ್ವಾತಂತ್ರ್ಯ ಹೋರಾಟ, ಖಾದಿಪ್ರಚಾರ, ರಂಗಭೂಮಿ, ಸಂಗೀತ-ನೃತ್ಯ, ಯಕ್ಷಗಾನ, ನಡುವೆ ಸಾಹಿತ್ಯರಚನೆ – ಇವುಗಳನ್ನೆಲ್ಲ ಮಾಡುತ್ತ ಬಂದರು. ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದರು; ಮಾಡಬೇಕು ಅನಿಸಿದ್ದನ್ನು ಮಾಡುತ್ತಹೋದರು – ಹೀಗೆ ನಮ್ಮೊಳಗೆ ಮೂಕಜ್ಜಿಯ ಕನಸುಗಳನ್ನು ಚಿಗುರಿಸಿದ ಕಾರಂತರಿಗೆ ನಾವೆಲ್ಲರೂ ಆಭಾರಿಗಳಾಗಿರಬೇಕು ಅಲ್ಲವೆ?
-ಚಿತ್ರಕೂಟ