ತೀವ್ರ ಕುತೂಹಲ ಕೆರಳಿಸಿದ್ದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಆರ್ಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ತಲಾ ಐದು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಮಬಲ ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲೆಚಾಕನಹಳ್ಳಿ ಬಸವರಾಜು ಅವರ ಪತ್ನಿ ಹೇಮಲತಾ ಅವರು ಅತ್ಯಧಿಕ 1054 ಮತ ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ.
ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಸಮಬಲದ ಗೆಲುವು ಸಾಧಿಸಿರುವುದರಿಂದ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಬೆಂಬಲಿತ ಹಾಗೂ ಡಿಸಿಸಿ ಬ್ಯಾಂಕ್, ಸರ್ಕಾರದ ನಾಮನಿರ್ದೇಶಿತರ ನೆರವು ಅನಿವಾರ್ಯವಾಗಿದೆ.
ಆಡಳಿತ ಮಂಡಳಿಯ 11 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5,ಜೆಡಿಎಸ್ 5 ಹಾಗೂ ಬಿಜೆಪಿ 1 ಸ್ಥಾನ ಗಳಿಸಿದೆ.
1)ಹೇಮಲತಾ ಕೆ. (ಸಾಮಾನ್ಯ ಮಹಿಳೆ)1054 ಮತ,2)ಜಿ.ಎಸ್.ಅಂಜನಾ ಶ್ರೀಕಾಂತ್ (ಸಾಮಾನ್ಯ ಮಹಿಳೆ) 626 ಮತ 3)ಮಹೇಶ್ ಜೆ.ಪಿ.(ಸಾಮಾನ್ಯ) 816 ಮತ, 4) ಯೋಗೇಶ್ ಕುಮಾರ್ ಹೆಚ್.ಎಸ್. (ಸಾಮಾನ್ಯ) 751 ಮತ, 5) ಜಿ.ಎನ್.ಉದಯ್ ಕುಮಾರ್ (ಬಿಸಿಎಂ (ಬಿ) 794 ಮತ 6) ಶ್ರೀಧರ ಎಂ.ಪಿ (ಬಿಸಿಎಂ (ಎ) 488 ಮತ ಹಾಗೂ 7) ಪಾಪಯ್ಯ ಸಿ.ಕೆ. (ಪರಿಶಿಷ್ಟ ಜಾತಿ) 467 ಮತ ಪಡೆದು ಆಯ್ಕೆ ಆಗಿದ್ದಾರೆ.
ವಿಎಸ್ಎಸ್ಎನ್ ಫ್ಯಾಕ್ಸ್ ವಿಭಾಗದಿಂದ ಯು.ಸಿ. ಶೇಖರ್ 28 ಮತ,ಬಿ.ಪಿ.ಸೋಮಶೇಖರ್ 26 ಮತ,ಕೆ.ಸಿ.ರವೀಂದ್ರ 25 ಹಾಗೂ ಪುನೀತ್ ಎನ್.23 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.
ತಮ್ಮ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಶಿಳ್ಳೆ ಹೊಡೆದು ಪಟಾಕಿ ಸಿಡಿಸಿ ಸಂಭ್ರಮಿಸಿದ ದೃಶ್ಯ ಕಂಡುಬಂತು.ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಹೂವಿನ ಹಾರ ಹಾಕಿ ಸಿಹಿ ತಿನಿಸಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
ಉಮ್ಮಡಹಳ್ಳಿ ಶಿವಪ್ಪ ತಂತ್ರಗಾರಿಕೆ
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ ತಂತ್ರಗಾರಿಕೆ ಬಹಳ ಕೆಲಸ ಮಾಡಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಫ್ಯಾಕ್ಸ್)ನಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿನಲ್ಲಿ ಉಮ್ಮಡಹಳ್ಳಿ ಶಿವಪ್ಪ ಸಾಕಷ್ಟು ಶ್ರಮ ಹಾಕಿದ್ದಾರೆ. 42 ಮತದಾರರ ಪೈಕಿ ಹಲವರ ವಿಶ್ವಾಸ ಗಳಿಸಿ ಅವರನ್ನು ಜೊತೆಗೆ ಕರೆದುಕೊಂಡು ಬಂದು ಮತ ಹಾಕಿಸಿದ ಶಿವಪ್ಪ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕನಾಗಿ ಹೊರಹೊಮ್ಮಿದ್ದಾರೆ.