ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳನ ಮಾಡುತ್ತಿದ್ದ ಓರ್ವ ಮನೆಗಳ್ಳನನ್ನು ಬಂಧಿಸಿರುವ ಮದ್ದೂರು ಪೊಲೀಸರು, ಆತನಿಂದ 11,04 ಲಕ್ಷ ರೂ. ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ಮೇಳಕೋಟೆ ಗ್ರಾಮದ ಹಾಲಿ ವಾಸ ನೆಲಮಂಗಲ ತಾಲ್ಲೂಕಿನ ಆಲೂರು ಗ್ರಾಮದ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಘಟನೆ ವಿವರ
ಮದ್ದೂರು ಟೌನಿನ ಹೊಳೆ ಬೀದಿಯ ವಾಸಿ ಕೆಂಪಶೆಟ್ಟಿ ಮತ್ತು ಅವರ ಅಣ್ಣನಾದ ರಂಗಸ್ವಾಮಿರವರು ತಮ್ಮ ಮನೆಯಲ್ಲಿ ಕಳೆದ 2023ರ ಡಿ.19ರಂದು ಯಾರೋ ಕಳ್ಳರು ಬೀಗವನ್ನು ಹೊಡೆದು ಚಿನ್ನದ ಒಡವೆ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಪತ್ತೆಗಾಗಿ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡೆ, ಅಪರ ಪೊಲೀಸ್ ಅಧೀಕ್ಷಕ ಡಿ.ವಿ.ತಿಮ್ಮಯ್ಯ, ಕೆ.ಎಸ್.ಪಿ.ಎಸ್ ಎಇ ಗಂಗಾಧರಸ್ವಾಮಿ, ಮಳವಳ್ಳಿ ಪೊಲೀಸ್ ಉಪಾಧೀಕ್ಷಕ ಕೃಷ್ಣಪ್ಪ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 142 ಗ್ರಾ ತೂಕದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 1,300 ಗ್ರಾಂ ತೂಕದ 1.04 ಲಕ್ಷ ರೂ. ಮೌಲ್ಯದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖಾ ಕಾಲದಲ್ಲಿ ಆರೋಪಿಯು ರಾತ್ರಿ ವೇಳೆ ಮನೆಯಲ್ಲಿ ಯಾರು ಇಲ್ಲದೆ, ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿರಿಸಿಕೊಂಡು, ಮನೆಯ ಬಾಗಿಲನ್ನು ಆಯುಧದಿಂದ ಮೀಟಿ ತೆಗೆದು, ಚಿನ್ನಾಭರಣಗಳನ್ನು ಮತ್ತು ಬೆಳ್ಳಿ ಸಾಮಾನುಗಳನ್ನು ಕಳವು ಮಾಡುತ್ತಿದ್ದ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮದ್ದೂರು ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸಿಸಿದ್ದಾರೆ.