ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗ ಬೇಕೆಂಬುವುದು ದಲಿತ ಸಂಘಟನೆ ಪದಾಧಿಕಾರಿಗಳ ಕೂಗಾಗಿತ್ತು. ಆದರೆ ಮಾಜಿ ಶಾಸಕ ಡಾ. ಕೆ ಅನ್ನದಾನಿ ದಲಿತ ಸಂಘಟನೆಗಳ ಪುತ್ಥಳಿ ನಿರ್ಮಾಣವಾಗಬೇಕೆಂಬ ಹೋರಾಟವನ್ನು ಅಣಕಿಸುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಜು ಕಿಡಿಕಾರಿದರು
ಮಳವಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಹೊರಬಾರದ ಮಾಜಿ ಶಾಸಕ ಕೆ.ಅನ್ನದಾನಿ ದಲಿತ ಮುಖಂಡರ ವಿರುದ್ಧ ಸಲ್ಲದ ಪದ ಬಳಕೆ ಮಾಡುತ್ತಿರುವುದು ಖಂಡನೀಯ. ಸ್ವಾತಂತ್ರ್ಯ ಬಂದು 70 ವರ್ಷಗಳಿಂದಲೂ ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕು ಎನ್ನುವುದು ದಲಿತರು ಸೇರಿದಂತೆ ಎಲ್ಲರ ಜನಪರ ಸಂಘಟನೆಗಳ ಬೇಡಿಕೆಯಾಗಿತ್ತು. ಆದರೆ ಎಂದೂ ಭಿಕ್ಷೆ ಬೇಡಿ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದಿಲ್ಲ ಎಂದರು.
ಸಂವಿಧಾನ ಶಿಲ್ಪಿಯನ್ನು ಗೌರವಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ ಕೆ.ಅನ್ನದಾನಿ ಚುನಾವಣಾ ಲಾಭಕ್ಕಾಗಿ ತರಾತುರಿಯಲ್ಲಿ ಪುತ್ಥಳಿ ನಿರ್ಮಿಸಿದ್ದಾರೆಯೇ ಹೊರತು ಅಭಿವೃದ್ದಿ ಪಡಿಸಲು ನಿರ್ಲಕ್ಷ್ಯ ವಹಿಸಿ, ಈಗಿನ ಶಾಸಕರು ಅಭಿವೃದ್ಧಿ ಪಡಿಸಿಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ದೂರಿದರು.
ಪುರಸಭೆ ಮಾಜಿ ಸದಸ್ಯ ಕಿರಣ್ ಶಂಕರ್ ಮಾತನಾಡಿ, ಮಾಜಿ ಶಾಸಕ ಡಾ.ಕೆ ಅನ್ನದಾನಿ ಮೀಸಲು ಕ್ಷೇತ್ರದ ಶಾಸಕರಾಗಿ ದಲಿತ ಸಂಘಟನೆ ಪದಾಧಿಕಾರಿಗಳ ಮೇಲೆ ಈ ರೀತಿ ಪದ ಬಳಕೆ ಮಾಡಿರುವುದು ಸರಿಯಲ್ಲ, ಈಗಾಗಲೇ ಪುರಸಭೆಯ 15ನೇ ಹಣಕಾಸಿನ ಯೋಜನೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸ್ವಷ್ಟಪಡಿಸಿದರು.
ಮುಖಂಡ ಮಹದೇವಯ್ಯ ಮಾತನಾಡಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ರವರ ಅಧಿಕಾರದಲ್ಲಿರುವಾಗಲು ಡಾ. ರೇಣುಕಾದೇವಿ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಇದ್ದರು, ಅಂದು ಅವರ ಬಗ್ಗೆ ಒಂದು ಮಾತನಾಡದ ಮಾಜಿ ಶಾಸಕರು ಇಂದು ರಾಜಕೀಯಕ್ಕಾಗಿ ಟೀಕಿಸುತ್ತಿದ್ದಾರೆಂದರು.
ಗೋಷ್ಠಿಯಲ್ಲಿ ಮುಖಂಡರಾದ ನಾಗಸಿದ್ಧಯ್ಯ, ಸಿದ್ದರಾಜು, ಮುದ್ದುರಾಜು, ಚಿನ್ನಸ್ವಾಮಿ, ಶಿವರಾಜು, ಶಂಕರ್, ಕುಮಾರಸ್ವಾಮಿ, ಮದನ್ ಹಾಗೂ ಸಿದ್ದರಾಜು ಉಪಸ್ಥಿತರಿದ್ದರು.