ಮಳವಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗೆ ಶಾಸಕ ಪಿಎಂ ನರೇಂದ್ರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಮಳವಳ್ಳಿ ಪಟ್ಟಣದ ಕನಕಪುರ ರಸ್ತೆಯ ಕಾಮಗಾರಿ ವೀಕ್ಷಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿದ ಶಾಸಕರು, ರಸ್ತೆ ಬದಿಯಲ್ಲಿ ನಿರ್ಮಿಸುತ್ತಿರುವ ಚರಂಡಿಗೆ ಅಡ್ಡಲಾಗಿ ಒಳಚರಂಡಿ ಮ್ಯಾನ್ ವೋಲ್, ಕುಡಿಯುವ ಪೈಪ್ ಹಾಗೂ ವಿದ್ಯುತ್ ಕಂಬಗಳು ಬಂದಿದ್ದರೂ ಕೂಡ ಅವುಗಳನ್ನು ತೆರವುಗೊಳಿಸಬೇಕೆಂಬ ಕನಿಷ್ಟ ಜ್ಞಾನವು ಇಲ್ಲದೇ ಕಾಮಗಾರಿ ನಡೆಸುತ್ತಿರುವ ಬಗ್ಗೆ ಕಿಡಿಕಾರಿದರು, ಚರಂಡಿಗೆ ಅಡ್ಡಲಾಗಿ ಮ್ಯಾನ್ವೋಲ್ ಬಂದಿದ್ದು, ಮಳೆ ನೀರು ಹೊರಕ್ಕೆ ಹೇಗೆ ಹೋಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಾರ್ವಜನಿಕರಿಗೆ ಅನುಕೂಲಕ್ಕಾಗಿ ರಸ್ತೆ ಮಾಡುತ್ತಿರುವ ನೀವು ಸಾರ್ವಜನಿಕರಿಗೆ ಏಕೆ ತೊಂದರೆ ಕೊಡುತ್ತಿದ್ದೀರಿ, ಮಳವಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದಾಗಿ ಬಂದು ವೀಕ್ಷಣೆ ಮಾಡಿ ಸ್ಥಳೀಯ ಪುರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಮ್ಯಾನ್ವೋಲ್, ಕುಡಿಯುವ ನೀರು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರವಾಗುವವರೆಗೂ ಕಾಮಗಾರಿಯನ್ನು ಮುಂದುವರಿಸಬಾರದು ಎಂದು ತಾಕೀತು ಮಾಡಿದರು.
ಹೆದ್ದಾರಿಯಲ್ಲಿ ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ಬಂದ ಸಂದರ್ಭದಲ್ಲಿ ರಸ್ತೆ, ಮನೆಗಳಿಗೆ ನೀರು ನುಗ್ಗುತ್ತಿದೆ, ಈಗಾಗಲೇ ಕೆಲವು ಕಡೆಗಳಲ್ಲಿ ಒಳಚರಂಡಿ ಪೈಪ್ಗಳು ಹೊಡೆದು ಹೋಗಿದೆ, ಪ್ರಶ್ನೆ ಮಾಡಿದರೇ ಇಲ್ಲಿನ ಇಂಜೀನಿಯರ್ಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ಸಾರ್ವಜನಿಕರು ಶಾಸಕರಿಗೆ ದೂರು ನೀಡಿದರು.
ಹೆದ್ದಾರಿ ಪ್ರಾಧಿಕಾರ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಕಾಮಗಾರಿ ಸಂಬಂಧ ಸಭೆ ನಡೆಸಬೇಕಾಗಿರುವುದರಿಂದ ಕೂಡಲೇ ಸಭೆಗೆ ಹಾಜರಾಗಿ ಕಾಮಗಾರಿ ಸಮಸ್ಯೆ ಬಗ್ಗೆ ಚರ್ಚಿಸಿದ ನಂತರ ಕಾಮಗಾರಿ ಆರಂಭಿಸಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಮುಖ್ಯಾಧಿಕಾರಿ ನಾಗರತ್ನಮ್ಮ, ಸದಸ್ಯ ಶಿವಸ್ವಾಮಿ, ಮುಖಂಡರಾದ ಬಸವರಾಜು, ಕಿರಣ್, ಶಂಕರ್, ವೀರೇಶ್, ಸತ್ಯ ಹಾಗೂ ಮಹದೇವ ಸೇರಿದಂತೆ ಹಾಜರಿದ್ದರು.