ವರದಿ: ಪ್ರಭು ವಿ ಎಸ್
ಕೃಷಿಕರು ತಮ್ಮ ಆದಾಯ ಮೂಲ ಹಾಗೂ ಬೇಸಾಯದ ಜೊತೆಗೆ ಹೈನುಗಾರಿಕೆಗೆ ಅವಲಂಬಿಸಿ ಸ್ವಾವಲಂಬಿ ಬದುಕನ್ನು ಕಂಡುಕೊಂಡು ಆರ್ಥಿಕವಾಗಿ ಮುನ್ನಡೆಯಬೇಕೆಂದು ಶಾಸಕ ಕೆ.ಎಂ ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನೂತನ ಪಶು ಚಿಕಿತ್ಸಾ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದ ಸರ್ಕಾರದೊಂದಿಗೆ ಚರ್ಚಿಸಿ ಮಲ್ಲನಕುಪ್ಪೆ ಗ್ರಾಮಕ್ಕೆ ಬಹುವರ್ಷಗಳ ಬೇಡಿಕೆ ಯಾಗಿದ್ದ ಪಶು ಚಿಕಿತ್ಸಾ ಕೇಂದ್ರವನ್ನು ತೆರೆದು ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿದ್ದು ಇದರ ಸದುಪಯೋಗಕ್ಕೆ ಪ್ರತಿಯೊಬ್ಬ ರೈತರು ಮುಂದಾಗಬೇಕೆಂದರು.
ಮಲ್ಲನಕುಪ್ಪೆ ಗ್ರಾ ಪಂ ಭಾಗದ ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಕೆಸ್ತೂರು, ಮದ್ದೂರು ಹಾಗೂ ನೆರೆಯ ಕುಣಿಗಲ್ ತಾಲೂಕಿಗೆ ತೆರಳುವ ಅನಿವಾರ್ಯತೆ ಇತ್ತಾದರೂ ಇದನ್ನರಿತ ತಾವು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಈ ಭಾಗದ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದು ಚಿಕಿತ್ಸಾಲಯ ಕೇಂದ್ರದಲ್ಲಿ ನುರಿತ ವೈದ್ಯರು ಸಿಬ್ಬಂದಿಗಳನ್ನು ನೇಮಕ ಮಾಡುವ ಜತೆಗೆ ತುರ್ತು ಸಂದರ್ಭಗಳಲ್ಲಿ ಮನೆ ಬಾಗಿಲಿಗೆ ವೈದ್ಯರು ತೆರಳಿ ರಾಸುಗಳಿಗೆ ಚಿಕಿತ್ಸೆ ನೀಡಲಿದ್ದು ರೈತರು ಇದರ ಸದ್ಬಳಕೆಗೆ ಮುಂದಾಗಬೇಕೆಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಸಿ.ಪಿ ರವಿ, ಮನ್ ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಸದಸ್ಯರಾದ ತಿಮ್ಮಯ್ಯ, ರವಿಕುಮಾರ್, ವಾಸು, ಎಂ.ಪಿ.ಸಿ.ಎಸ್ ಸದಸ್ಯರಾದ ಮಂಜು, ಶಿವನಂಜು ,ಮಹೇಶ್, ರವಿ ಹಾಗೂ ಪಶು ವೈದಾಧಿಕಾರಿ ಡಾ.ಬಿ ಬಿ ಪ್ರವೀಣ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.