ದೇಶದ ರಕ್ಷಣೆಗಾಗಿ ತ್ಯಾಗ- ಬಲಿದಾನ ಮಾಡಿರುವ ಸೈನಿಕರ ಸೇವೆ ಅವಿಸ್ಮರಣೀಯ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸ್ವರ್ಣಸಂದ್ರದಲ್ಲಿರುವ ವೀರಯೋಧ ಸುಧೀರ್ ಪಾರ್ಕ್ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಶರತ್ ಹಾಗೂ ಸುಧೀರ್ ಅವರ ಸ್ಮಾರಕಗಳಿಗೆ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ರೋಟರಿ ಸಂಸ್ಥೆ ವತಿಯಿಂದ ನಮನ ಸಲ್ಲಿಸಲಾಯಿತು.
ನಮ್ಮ ದೇಶಕ್ಕೆ ಯೋಧರು ಮತ್ತು ರೈತರು ಬಹಳ ಮುಖ್ಯ. ದೇಶ ಕಾಯದೇ ಹೋದರೆ ಶತೃರಾಷ್ಟ್ರಗಳಿಂದ ನಿರ್ನಾಮವಾಗುತ್ತದೆ. ರೈತ ಅನ್ನ ಬೆಳೆಯದಿದ್ದರೆ ನಾವೆಲ್ಲರೂ ನಿರ್ನಾಮವಾಗಬೇಕಾಗುತ್ತದೆ ಎಂದರು.
ಕಾರ್ಗಿಲ್ ವಿಜಯ ದಿವಸದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅದರ ಚರಿತ್ರೆ ಇಡೀ ವಿಶ್ವಕ್ಕೆ ತಿಳಿದಿದೆ. 1999ರ ಜುಲೈ 26ರಂದು ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುತ್ತೇವೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 23 ವರ್ಷ ತುಂಬುತ್ತಿದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ನಮ್ಮ ರೋಟರಿ ಸಂಸ್ಥೆಯು ಸ್ಮರಿಸುತ್ತದೆ ಎಂದರು.
ಅಂದು ಕಾಶ್ಮಿರದ ಕಾರ್ಗಿಲ್ ಜಿಲ್ಲೆಯಲ್ಲಿ 527 ಸೈನಿಕರು ಹುತಾತ್ಮರಾದರು. ಅವರಿಗೆ ರೋಟರಿ ಸಂಸ್ಥೆ ಗೌರವ ನಮನ ಸಲ್ಲಿಸುತ್ತೇವೆ. ಇದೇ ಸಂದರ್ಭದಲ್ಲಿ ನಿವೃತ ಸೈನಿಕರನ್ನು ಗೌರವಿಸುತ್ತಿದ್ದು, ಯೋಧರಿಗೆ ಇನ್ನೂ ಹತ್ತು ಹಲವಾರು ಅನುಕೂಲವನ್ನು ದೇಶ ಕಾಯುವ ಗಡಿ ಭಾಗಗಳಲ್ಲಿ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಲಿ ಎಂದು ಕೇಳಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅನುಪಮ, ನಿಕಟಪೂರ್ವ ಅಧ್ಯಕ್ಷರುಗಳಾದ ಬರ್ನಾಡಪ್ಪ, ಸೋಮಶೇಖರ್, ಲೋಕೇಶ್, ಸದಸ್ಯರಾದ ಡಿ.ನಾಗೇಶ್. ಕೆಂಪೇಗೌಡ, ಕೆ.ಸಿ.ನಾಗಮ್ಮ, ಶರತ್, ಸುಜಾತ ಸಿದ್ದಯ್ಯ, ನಿವೃಎ ಹಿರಿಯ ಸೈನಿಕರು ಇತರರು ಭಾಗವಹಿಸಿದ್ದರು.