ತಾಯಿಯ ಎದೆ ಹಾಲು ಮಗುವಿಗೆ ಅಮೃತ್ ವಿದ್ದಂತೆ, ಹಾಗಾಗಿ ತಾಯಂದಿರು ಹೆರಿಗೆ ಆದ ಒಂದು ಗಂಟೆ ಒಳಗಾಗಿ ಮಗುವಿಗೆ ಹಾಲುಣಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಹೇಳಿದರು.
ಶ್ರೀರಂಗಪಟ್ಟಣದ ಉತ್ತರಾಧಿಮಠದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಠಿಕ ಆಹಾರ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆರಿಗೆ ಆದ ಆರು ತಿಂಗಳ ವರೆಗೆ ತಾಯಿಯ ಎದೆ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು ಎಂದರು.
ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಪೌಷ್ಠಿಕ ಆಹಾರದ ಮಹತ್ವ ಕುರಿತು ಹಾಗೂ ತಾಯಿಯ ಎದೆ ಹಾಲಿನ ಜೊತೆ ಪೂರಕ ಆಹಾರ ಪ್ರಾರಂಭಿಸಬೇಕು. ಮಗು 2 ವರ್ಷದ ವರೆಗೆ ಸಂಪೂರ್ಣ ತಾಯಿಯ ಎದೆ ಹಾಲು ನೀಡಬೇಕು ಇದರಿಂದ ಮಗುವಿಗೆ ಯಾವುದೇ ಕಾಯಿಲೆ ಬರುವುದಿಲ್ಲ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಗಳಾ, ಮಗುವಿಗೆ ಸ್ತನ್ಯಪಾನ ಮಾಡಿಸುವ ಸರಿಯಾದ ವಿಧಾನಗಳ ಕುರಿತು ತಾಯಂದಿರಿಗೆ ಮಾಹಿತಿ ನೀಡಿದರು. ಮೇಲ್ವಿಚಾರಕರಾದ ಪುಷ್ಪಾವತಿ, ಮಕ್ಕಳ ಪೂರಕ ಪೌಷ್ಠಿಕ ಆಹಾರದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಂಜುಳ, ವಿಜಯಲಕ್ಷ್ಮಿ, ಶುಭ, ಅಕ್ಷತಾ, ಜಯಮ್ಮ, ಗರ್ಭಿಣಿಯರು, ಬಾಣಂತಿಯರು ಹಾಜರಿದ್ದರು.