ಸಾಲಬಾಧೆ ತಾಳಲಾರದೆ ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿ ಚಂದಗಾಲು ಗ್ರಾಮದ ರೈತ ಎಸ್.ಎನ್.ಹೊನ್ನೇಗೌಡ (72)ಅವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತ ಹೊನ್ನೇಗೌಡ ಅವರು ಗುರುವಾರ ಬೆಳಿಗ್ಗೆ ತಮ್ಮ ರೇಷ್ಮೆ ಹುಳು ಸಾಕಾಣಿಕೆ ಮನೆ ಒಳಗೆ ವಿಷ ಕುಡಿದಿದ್ದಾರೆ. ತಕ್ಷಣ ಗ್ರಾಮಸ್ಥರು ಗಮನಿಸಿ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಹೊನ್ನೆಗೌಡ ಮೃತಪಟ್ಟರು.
ರೈತ ಹೊನ್ನೇಗೌಡ ಅವರು ಸುಮಾರು 1.20 ಎಕರೆ ಜಮೀನು ಹೊಂದಿದ್ದು, ಹಲ್ಲೇಗೆರೆ ಕೃಷಿ ಪತ್ತಿನ ಸಹಕಾರ ಸಂಘ ದಲ್ಲಿ 40 ಸಾವಿರ, ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 60ಸಾವಿರ, ರೇಷ್ಮೆ ಸಾಕಾಣಿಕೆ ಕಟ್ಟಡ ನಿರ್ಮಾಣ ಹಾಗೂ ಕೊಳವೆ ಬಾವಿ ತೋಡಿಸಲೆಂದು 2.5 ಲಕ್ಷ ಸಾಲ ಹಾಗೂ ಕೈಸಾಲ ಸೇರಿ ಒಟ್ಟು 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಈ ಸಾಲ ತೀರಿಸಲಾಗದೆ ಆತ್ಮಹತ್ಯೆ ಶರಣಾಗಿದ್ದಾರೆ.
ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.