ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿಯ ಬಿಎಂಸಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರನ್ನು ಕರೆತರುವಂತೆ ಕೆಎಂಎಫ್ ನಿರ್ದೇಶಕ ಒತ್ತಾಯ ಮಾಡಿರುವುದಕ್ಕೆ ವೀಡಿಯೋ ಸಾಕ್ಷಿ ಇದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಬಿ ಬಸವೇಶ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಡ ಹಾಕಿಲ್ಲ ಎಂದು ಹೇಳುವ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿಗಳೇ, ಕೆಎಂಎಫ್ ನಿರ್ದೇಶಕ ವಿಶ್ವನಾಥ್ ಅವರೇ ಖುದ್ದಾಗಿ ಜನ ಕರೆತರುವಂತೆ ಹೇಳಿರುವ ವಿಡಿಯೋ ವೈರಲ್ ಆಗುತ್ತಿರುವುದಕ್ಕೆ ಏನು ಹೇಳುತ್ತೀರಾ? ಹಾಲಿನ ಡೈರಿ ಕಾರ್ಯದರ್ಶಿಗಳು, ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ, ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಬೆದರಿಕೆ ಹಾಕಿದ್ದಾರೆ.
ಕಾರ್ಯದರ್ಶಿಗಳ ಇಂತಹ ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಪಕ್ಷ ಎಂದಿಗೂ ಬಗ್ಗುವುದಿಲ್ಲ. ಕಾರ್ಯಕ್ರಮಕ್ಕೆ ಜನರನ್ನು ಕರೆತರುವಂತೆ ತಾಕೀತು ಮಾಡುತ್ತಿರುವ ಬಗ್ಗೆ ಈಗಾಗಲೇ ವಿಡಿಯೋ ವೈರಲ್ ಆಗುತ್ತಿರುವುದಕ್ಕೆ ಉತ್ತರ ನೀಡಲಿ. ಕಾರ್ಯದರ್ಶಿಗಳು ಪಕ್ಷದ ಏಜೆಂಟ್ಗಳಂತೆ ವರ್ತನೆ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಎಚ್ವರಿಕೆ ನೀಡಿದರು.
ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರು ಟಿಎಪಿಸಿಎಂಎಸ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ಟಿಎಪಿಸಿಎಂಎಸ್ನ ಕಚೇರಿಗೆ ಬರುವುದಕ್ಕೆ ಅರ್ಹರಾಗಿರುತ್ತಾರೆ. ಪಿ.ಎಂ ನರೇಂದ್ರಸ್ವಾಮಿ ಅವರು ಟಿಎಪಿಸಿಎಂಎಸ್ಗೆ ಬಂದರೇ ಷೇರುದಾರರು ತಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳಲು ಬರುತ್ತಾರೆ, ರೈತ ಸಮುದಾಯ ಭವನದಲ್ಲಿ ಎಲ್ಲಾ ಪಕ್ಷದವರು ಶುಲ್ಕಕಟ್ಟಿ ಕಾರ್ಯಕ್ರಮ ನಡೆಸುತ್ತಾರೆ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸ್ವಂತ ಕಚೇರಿ ಇದ್ದು, ಟಿಎಪಿಸಿಎಂಎಸ್ ಕಚೇರಿಯನ್ನು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಸ್ವಷ್ಟಪಡಿಸಿದರು.
ವಿಶ್ವನಾಥ್ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ದಿಗಾಗಿ ಕೆಎಂಎಫ್ ಹಾಗೂ ಮನ್ಮುಲ್ ನಿರ್ದೇಶಕರಾಗಿ ಶ್ರಮಿಸುತ್ತಿದ್ದಾರೆ.ಈ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಅವರೇ ವಿಡಿಯೋ ಒಂದರಲ್ಲಿ ಬಿಎಂಸಿ ಉದ್ಘಾಟನೆಗೊಂಡು 6
ತಿಂಗಳು ಆಗಿದೆ ಎಂದು ಹೇಳಿರುತ್ತಾರೆ. ಉದ್ಘಾಟನೆಗೊಂಡಿರುವ ಬಿ.ಎಂಸಿ ಕೇಂದ್ರವನ್ನು ಮತ್ತೊಮ್ಮೆ ಉದ್ಘಾಟನಾ ಸಮಾರಂಭದ ನೆಪದಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಬಸವರಾಜು ಮಾತನಾಡಿ, ಕೆಎಂಎಫ್ ನಿರ್ದೇಶಕರು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ರೈತರಿಗೆ ಸುಳ್ಳು ಭರವಸೆಗಳನ್ನುನೀಡುತ್ತಿದ್ದಾರೆ. ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ರಾಜ್ಯ ಮಟ್ಟದಲ್ಲಿಯೇ
ಪ್ರಾರಂಭಗೊಂಡಿಲ್ಲ, ಬ್ಯಾಂಕ್ ಆರಂಭಗೊಳ್ಳದಿದ್ದರೂ ಸಾಲ ಕೊಡಿಸುತ್ತೇವೆ, ಹಸು ಕೊಡಿಸಲಾಗುವುದು ಎನ್ನುವುದರ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ಹೇಳಿದರು.
ಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು, ಮುಖಂಡರಾದ ಸಿ.ಪಿರಾಜು, ಜಗದೀಶ್, ದಿಲೀಪ್,ಕೃಷ್ಣಮೂರ್ತಿ ಶಿವಕುಮಾರ್, ಟಿ.ಸಿ. ಚೌಡಯ್ಯ, ಶಿವಮಾದೇಗೌಡ ಸೇರಿದಂತೆ ಇತರರಿದ್ದರು.