ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹೆಚ್ಚು ಹಾನಿಯಾಗಿದ್ದು,ಸಂ ಕಷ್ಟದಲ್ಲಿರುವ ಜನರ ನೋವಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪರಿಹಾರ ಪಾವತಿ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀಡಿ ಕಾಲೋನಿಯವರಿಗೆ ಪರಿಹಾರ ಒದಗಿಸಿ: ಭಾರೀ ಮಳೆಯ ಹಿನ್ನಲೆ ಬೀಡಿ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದ್ದು, ಸರ್ಕಾರದಿಂದ ನೀಡಲಾಗುವ 10,000 ರೂ ತುರ್ತು ಪರಿಹಾರವನ್ನು ನಾಳೆ ಒಳಗಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀಡಿ ಕಾಲೋನಿಯ ಮನೆಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಬೇಕು. ಕೆಳ ಮಹಡಿ ಮನೆಗಳಲ್ಲಿ ವಾಸವಾಗಿರುವವರಿಗೆ ಹಣ ದೊರಕುವಂತೆ ನೋಡಿಕೊಳ್ಳಬೇಕು. ಯಾರು ಕೂಡ ಪರಿಹಾರದಿಂದ ವಂಚಿತರಾಗಬಾರದು ಎಂದರು.
ಬೀಡಿ ಕಾಲೋನಿಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಬೀದಿ ಹಾಗೂ ಮನೆಗಳಲ್ಲಿ ನೀರು ನುಗ್ಗುವುದು ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರವಾಗಬೇಕು. ಅಧಿಕಾರಿಗಳ ತಾಂತ್ರಿಕಾ ತಂಡ ರಚಿಸಿ ವರದಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಮಳೆಯಿಂದ ಹಾನಿಗೆ ಪರಿಹಾರ ಒದಗಿಸುವ ಸಂದರ್ಭದಲ್ಲಿ ಯಾರೂ ಕೂಡ ಪರಿಹಾರದಿಂದ ವಂಚಿತರಾಗಬಾರದು. ಸರ್ಕಾರದಿಂದ ಅಧಿಕಾರಿಗಳು ನೀಡುವ ವರದಿ ಪ್ರಕಾರ ಅನುದಾನ ಬಿಡುಗಡೆ ಮಾಡಲಾಗುವುದು. ಅದನ್ನು ಶೀಘ್ರವಾಗಿ ತಲುಪಿಸಬೇಕು.
ಮಳೆ ಹಾನಿ ಕುರಿತಂತೆ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವರದಿ ನೀಡಬೇಕು. ತಾತ್ಕಾಲಿಕವಾಗಿ ತುರ್ತು ಕಾಮಗಾರಿ ಕೈಗೊಳ್ಳಲು ಎನ್.ಡಿ.ಆರ್.ಎಫ್ ನಿಂದ ಬಿಡುಗಡೆಯಾಗುವ ಅನುದಾನ ಬಳಸಿಕೊಂಡು ಕೆಲಸವನ್ನು ಪ್ರಾರಂಭಿಸಿ ಪ್ರತಿ ದಿನ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದರು.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದ ಕೆರೆ ನೀರು ಕೆಸರು,ಗಿಡ ಗಂಟೆಗಳು ಬಂದು ನಿಂತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವುಗಳನ್ನು ನಾಳೆಯೊಳಗಾಗಿ ಕಾವೇರಿ ನೀರಾವರಿ ನಿಗಮ ಹಾಗೂ ಎನ್.ಹೆಚ್ ಅಧಿಕಾರಿಗಳು ತೆರವುಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತೀವ್ರತರವಾಗಿ 154 ಮನೆಗಳು ಹಾಗೂ 25% ಒಳಗೆ 456 ಮನೆ ಹಾನಿಯಾಗಿದ್ದು, ಪರಿಹಾರ ನೀಡಲಾಗಿದೆ. ಸರ್ಕಾರದಿಂದ 10 ಕೋಟಿ ಅನುದಾನ ಸಹ ಬಂದಿರುತ್ತದೆ ಎಂದರು.
ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಗಳು ಮಳೆಹಾನಿ ಹಾಗೂ ಪರಿಹಾರ ನೀಡಿರುವ ವರದಿಯನ್ನು ಕುರಿತು ಪ್ರತಿದಿನ ಸಭೆ ನಡೆಸಬೇಕು. ನಷ್ಟವಾಗಿರುವ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 606.90 ಹೆಕ್ಟೇರ್ ತೋಟಗಾರಿಕೆ ಬೆಳೆ, 197.12 ಹೆಕ್ಟೇರ್ ಕೃಷಿ ಬೆಳೆ ಹಾನಿ,4200 ಕೋಳಿ, 46 ಸಣ್ಣ ಪ್ರಾಣಿ ಹಾಗೂ 5 ದೊಡ್ಡ ಪ್ರಾಣಿಗಳ ಪ್ರಾಣ ಹಾನಿಯಾಗಿದೆ ಎಂದು ಆಯಾ ಇಲಾಖೆ ಮುಖ್ಯಸ್ಥರು ತಿಳಿಸಿದರು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು,ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವ ಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಆರ್.ಐಶ್ವರ್ಯ, ತಹಶೀಲ್ದಾರರಾದ ಕುಂಇಅಹಮದ್, ಶ್ವೇತಾ, ಎಂ.ವಿ.ರೂಪ, ನಯನ, ನರಸಿಂಹಮೂರ್ತಿ, ನಂದೀಶ್, ಕಾರ್ಯಪಾಲಕ ಅಭಿಯಂತರ ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ ಎನ್ ಧನಂಜಯ ಸೇರಿದಂತೆ ಇತರರು ಉಪಸ್ಥಿತರಿದ್ದರು