ಮಂಡ್ಯ ತಾಲ್ಲೂಕಿನ ಸಾತನೂರು, ಕೊಮ್ಮೇರಹಳ್ಳಿ ಹಾಗೂ ಹೊನಗಾನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಸುಮಾರು ನೂರು ಜನರಿಗೆ ಪರಿಹಾರದ ಚೆಕ್ ಅನ್ನು ಶಾಸಕ ಎಂ. ಶ್ರೀನಿವಾಸ್ ವಿತರಿಸಿದರು.
ನಂತರ ಮಾತನಾಡಿದ ಅವರು,ಸಾತನೂರು ಗ್ರಾಮದಲ್ಲಿ ಹೆಚ್ಚಿನ ಮಳೆ ಹಾನಿ ಸಂಭವಿಸಿದ್ದು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಮನೆಗಳು,ದೇವಸ್ಥಾನ ಹಾಗೂ ಬೆಳೆಗೆ ಹಾನಿಯಾಗಿದೆ.ಈ ಹಿನ್ನಲೆಯಲ್ಲಿ ಸಾತನೂರು ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿಗೆ ತಲಾ 10 ಸಾವಿರ ಪರಿಹಾರ ಧನ ವಿತರಿಸಲಾಗಿದೆ.ಸರ್ಕಾರದ ವತಿಯಿಂದ ಹೆಚ್ಚಿನ ಮಳೆಹಾನಿಯಾದ ಮನೆಗಳಿಗೆ ಐದು ಲಕ್ಷದವರೆಗೆ ಪರಿಹಾರವನ್ನು ಮುಂದಿನ ದಿನಗಳಲ್ಲಿ ಕೊಡಿಸಲಾಗುವುದು ಎಂದರು.
ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲು ಪ್ರಯತ್ನ ಮಾಡಿದ್ದೇನೆ. ನಾಳೆ ನೀರಾವರಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು,ಆ ಸಂದರ್ಭದಲ್ಲಿ ಮಳೆಹಾನಿಯ ಬಗ್ಗೆ ಸಮಗ್ರವಾಗಿ ಮನವರಿಕೆ ಮಾಡಿ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ವಿತರಿಸಲು ಮನವಿ ಮಾಡಲಾಗುವುದೆಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಮಾತನಾಡಿ,ಶಾಸಕರಾದ ಎಂ.ಶ್ರೀನಿವಾಸ್ ಅವರು ಮಳೆಹಾನಿಯಿಂದ ನಷ್ಟಕ್ಕೆ ಒಳಗಾದ ಎಲ್ಲರಿಗೂ ಪರಿಹಾರ ವಿತರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಸರ್ಕಾರದಿಂದ ಒದಗಿಸಲು ಮುಂದಾಗಲಿದ್ದಾರೆ ಎಂದರು.
ಮುಖಂಡರಾದ ಶಿವಕುಮಾರ್, ಜಯರಾಮ್ ಸೇರಿದಂತೆ ನೂರಾರು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.