ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ಸರ್ಕಾರ ಕಲಾವಿದರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ಸರ್ಕಾರದ ಸೌಲಭ್ಯಗಳು ನೈಜ ಕಲಾವಿದರಿಗೆ ಸಿಗುತ್ತಿಲ್ಲ. ಅನೇಕ ಕಲಾವಿದರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನಾಕಾರರರು ಸಂಘ ಸಂಸ್ಥೆಗಳಿಗೆ ಧನ ಸಹಾಯ ಹಾಗೂ ಅಸಂಘಟಿತ ಕಲಾವಿದರಿಗೆ ವೇಷಭೂಷಣ, ವಾದ್ಯ ಪರಿಕರಕ್ಕೆ ಸಹಾಯಧನ ಮಂಜೂರು ಮಾಡಲು ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ರೂ.ಕ್ರಿಯಾ ಯೋಜನೆ ಮೀಸಲಿರಿಸಬೇಕು ಒತ್ತಾಯಿಸಿದರು.
10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಸಾಹಿತಿ ಅಥವಾ ಕಲಾವಿದರು ಅನಾರೋಗ್ಯದಿಂದ ಅಥವಾ ಯಾವುದೇ ರೀತಿಯ ಮರಣಕ್ಕೆ ತುತ್ತಾದರೆ ಅವರ ಕುಟುಂಬಕ್ಕೆ 15 ಲಕ್ಷ ರೂ.ಗಳನ್ನು ಪರಿಹಾರ ನೀಡಬೇಕು
ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಮತ್ತು ಶಾಲಾ ಕಾಲೇಜುಗಳಲ್ಲಿ ಜನಪದವನ್ನು ಉಳಿಸಿ ಬೆಳೆಸಲು ಜನಪದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜನೆ ಪಡೆದು ಕಾರ್ಯಕ್ರಮ ನಡೆಸಿದ ಕಲಾವಿದರಿಗೆ 10 ದಿನದೊಳಗಾಗಿ ಅವರ ಸಂಭಾವನೆಯನ್ನು ಅವರ ಖಾತೆಗೆ ಜಮಾ ಮಾಡಬೇಕು.
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಜಿಲ್ಲಾ ಮತ್ತು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಲಾವಿದರಾದ ಪುಟ್ಟಸ್ವಾಮಿ ನೇರಲಕೆರೆ, ಶಿವಣ್ಣ ಹೆಮ್ಮಿಗೆ, ಗೊರವಾಲೆ ಚಂದ್ರಶೇಖರ್, ಬಸವರಾಜು, ಉಮಾಪತಿ, ದೇವರಾಜು ಕೊಪ್ಪ ಹಾಗೂ ಮಂಜುನಾಥ ಕಾಳೇನಹಳ್ಳಿ ಭಾಗವಹಿಸಿದ್ದರು.