- ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂ.ಹಣ ವಂಚನೆ
- ತಲಾ ಒಂದು ಕೋಟಿ ರೂ.ಗಳ ದಂಡ
- ಕೆಬ್ಬಳ್ಳಿ ಆನಂದ್ ಸೇರಿದಂತೆ 5 ಮಂದಿ ಅಪರಾಧಿಗಳೆಂದು ಘೋಷಿಸಿದ ಬೆಂಗಳೂರಿನ ಸಿಬಿಐ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂ.ಹಣವನ್ನು ಲಪಟಾಯಿಸಿ ವಂಚನೆ ಎಸಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆಬ್ಬಳ್ಳಿ ಆನಂದ್ ಸೇರಿದಂತೆ 5 ಮಂದಿ ಅಪರಾಧಿಗಳೆಂದು ಘೋಷಿಸಿದ ಬೆಂಗಳೂರಿನ ಸಿಬಿಐ ನ್ಯಾಯಾಲಯ ಏಳು ವರ್ಷ ಕಠಿಣ ಸಜೆ ಹಾಗೂ ತಲಾ ಒಂದು ಕೋಟಿ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಕೆಬ್ಬಳ್ಳಿ ಆನಂದ್, ಸಹಚರರಾದ ನಾಗಲಿಂಗ ಸ್ವಾಮಿ,ಚಂದ್ರಶೇಖರ್ ಹಾಗೂ ಇಬ್ಬರು ಸೇರಿ ಐದು ಮಂದಿ ವಂಚನೆ ಪ್ರಕರಣದಲ್ಲಿ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ಎಲ್ಲರಿಗೂ ತಲಾ 1 ಕೋಟಿ ರೂ.ದಂಡ ವಿಧಿಸಿದೆ.
ಮಂಡ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಕೆಬ್ಬಳ್ಳಿ ಆನಂದ್ 2013 ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಐದು ಕೋಟಿ ರೂ.ಹಣವನ್ನ ಆಗಿನ ಆಯುಕ್ತರ ಕಡೆಯಿಂದ ಪಡೆದು ವಂಚಿಸಿದ್ದರು. ಯಾವಾಗ ಮುಡಾಗೆ ಹಣ ಹಿಂದಿರುಗಿಸಲಿಲ್ಲವೋ ಆಗ ಆಯುಕ್ತರು ಪೋಲಿಸರಿಗೆ ದೂರು ನೀಡಿದ್ದರು.
ಇದೇ ರೀತಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಕೆಬ್ಬಳ್ಳಿ ಆನಂದ್ ಹಾಗೂ ಸಂಗಡಿಗರು ಐದು ಕೋಟಿ ಹಣ ಪಡೆದು ವಂಚನೆ ಎಸಗಿದ್ದರು.
ಈ ಹಗರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಅದರಂತೆ ತನಿಖೆ ನಡೆದು ಇಂದು ಸಿಬಿಐ ನ್ಯಾಯಾಲಯ ಐದು ಮಂದಿಗೆ ಏಳು ವರ್ಷಗಳ ಕಠಿಣ ಸಜೆ ಹಾಗೂ ತಲಾ ಒಂದು ಕೋಟಿ ದಂಡ ವಿಧಿಸಿ ಆದೇಶ ನೀಡಿದೆ.