ಸರ್.ಎಂ.ವಿಶ್ವೇಶ್ವರಯ್ಯನವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು, ಸಾಧನೆ ಮಾಡುವ ಹಂಬಲ ಇರಿಸಿಕೊಳ್ಳಬೇಕಿದೆ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.
ಮಂಡ್ಯನಗರದ ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಗೆಳೆಯ ಬಳಗ ಮತ್ತು ಮಾರಿಗುಡಿ ಗೆಳೆಯರ ಬಳಗ ಆಯೋಜಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯನ್ನು ಹಸಿರು ಮಾಡಿ, ಅನ್ನ ನೀಡಿದ ಅನ್ನದಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಪ್ರಸಿದ್ಧ ಇಂಜಿನಿಯರ್ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ, ಪ್ರತಿ ಮನೆ ಮನೆಗಳಲ್ಲೂ ಅವರ ಸ್ಮರಣೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ನಾಗರೀಕರಿಗೆ ಸಿಹಿ ವಿತರಿಸಿ, ಘೋಷಣೆಗಳನ್ನು ಕೂಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿ. ಅವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಪ್ರಸನ್ನ, ಸರ್.ಎಂ.ವಿ. ಗೆಳೆಯ ಬಳಗದ ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ರಮೇಶ್, ಮಾರಿಗುಡಿ ಗೆಳೆಯರ ಬಳಗದ ಜೆ.ಕೆ.ಕಾಂತ, ಕೃಷ್ಣ, ವಿನಯ್, ಸಿದ್ದರಾಜು, ಮಾದರಾಜೇ ಅರಸು, ಹೊಸಹಳ್ಳಿ-ರಾಮನಹಳ್ಳಿ ಮುಖಂಡರು ಮತ್ತಿತರರಿದ್ದರು.