ಮಂಡ್ಯ ಮಿಮ್ಸ್ನಲ್ಲಿ ಕಾನೂನುಬಾಹಿರ ಆಡಳಿತ, ಅಕ್ರಮ ನೇಮಕಾತಿ, ಅವ್ಯವಹಾರವನ್ನು ಸಿ.ಐ.ಡಿ, ತನಿಖೆಗೆ ಆದೇಶಿಸಬೇಕೆಂದು ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಆಗ್ರಹಿಸಿದೆ.
ಮಂಡ್ಯದ ಮಿಮ್ಸ್ ಮುಂದೆ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಆಪ್ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮಿಮ್ಸ್ ಅವ್ಯವಹಾರ ತನಿಖೆ ನಡೆಸುವಂತೆ ಆಗ್ರಹದ ಮನವಿ ಪತ್ರ ಸಲ್ಲಿಸಿದರು.
ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಕೃಷ್ಣ ಅವರು, ಜಿಲ್ಲಾಸ್ಪತ್ರೆಯು ಜನರ ಜೀವನ ರಕ್ಷಣೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಹಣದಿಂದ ಸ್ಥಾಪನೆಗೊಂಡಿದ್ದು, ಪೂರಕವಾಗಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಕಾಯ್ದೆ ಮತ್ತು ನಿಯಮಗಳನುಸಾರ ಆಡಳಿತ ನಡೆಸಬೇಕಾದ ಮಿಮ್ಸ್ನಲ್ಲಿ ಆಕ್ರಮವಾಗಿ ಜೇಷ್ಠತೆ, ಅರ್ಹತೆ ಇಲ್ಲದವರಿಗೆ ಇಲಾಖಾ ನಿಯಮಾವಳಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿ ಕಾನೂನು ಉಲ್ಲಂಘನೆ ಮಾಡಿ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಮತ್ತು ಪ್ರಾಂಶುಪಾಲರನ್ನು ನೇಮಕ ಮಾಡಿರುತ್ತಾರೆ ಎಂದು ಆರೋಪಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇಷ್ಟೆಲ್ಲಾ ಕಾನೂನುಬಾಹಿರ ಆಡಳಿತ ನಡೆಯುತ್ತಿದ್ದರೂ, ಜಿಲ್ಲಾಡಳಿತ ನಿರ್ಲಕ್ಷತನ ಮನೋಭಾವ ತಾಳಿ ಬೇಜವಾಬ್ದಾರಿತನದಿಂದ ಪರೋಕ್ಷವಾಗಿ ಅಕ್ರಮವಾಗಿ ಆಯ್ಕೆಯಾಗಿರುವ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಮತ್ತು ಪಾಂಶುಪಾಲರಿಗೆ ಬೆಂಬಲ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಈ ಮೂಲಕ ಮಿಮ್ಸ್ ಸಂಸ್ಥೆ ಮತ್ತು ಜಿಲ್ಲಾ ಆಸ್ಪತ್ರೆಯನ್ನು ದಿವಾಳಿತನಕ್ಕೆ ಸ್ವತಃ ಜಿಲ್ಲಾಡಳಿತ ಮತ್ತು ಸರ್ಕಾರ ನೂಕಿರುವುದು ದುರಂತ ಮತ್ತು ನಾಚಿಕೆಗೇಡು ಎಂದು ದೂರಿದ ಅವರು ಮುಖ್ಯಮಂತ್ರಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಂಠ,ಹೆಚ್.ಎಸ್.ಗಂಗರಾಜು ಮತ್ತಿತರರಿದ್ದರು