ಹೆಣ್ಣು ಮಗು ಹೆತ್ತಿದ್ದಕ್ಕೆ ಸೊಸೆಯನ್ನು ಹೊಣೆಯಾಗಿಸಿ ಕಿರುಕುಳ ನೀಡುವ ಜನರಿಗೆ ಹೆಣ್ಣು ಮಗುವಿನ ಜನನಕ್ಕೆ ಅವರ ಮಗನೇ ಕಾರಣ, ಹೊರತು ಸೊಸೆಯಲ್ಲ ಎಂಬುವುದನ್ನು ತಿಳಿಸುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆ ವೇಳೆ, ತಮ್ಮ ವಂಶೋದ್ದಾರಕ್ಕೆ ಗಂಡು ಮಗುವಿಗೆ ಜನ್ಮವಿತ್ತಿಲ್ಲ ಎಂದು ಸೊಸೆಗೆ ಕಿರುಕುಳ ನೀಡುವ ಘಟನೆಗಳ ಬಗ್ಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಏಕಸದಸ್ಯ ಪೀಠ, ಹೆಣ್ಣು ಮಗು ಜನಿಸಿದ್ದಿಕ್ಕಾಗಿ ಸೊಸೆಯನ್ನು ಹಿಂಸಿಸುವ ಜನರಿಗೆ, ಹೆಣ್ಣು ಮಗುವಿನ ಜನನಕ್ಕೆ ತಮ್ಮ ಮಗನೇ ಮುಖ್ಯ ಕಾರಣ ಎಂಬುವುದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಅದರಲ್ಲಿ ದಂಪತಿಯ ಸಮಾನ ಪಾಲಿದೆ ಎಂದು ಹೈಕೋರ್ಟ್ ಜನವರಿ 8ರ ತನ್ನ ಅದೇಶದಲ್ಲಿ ಹೇಳಿದೆ.
ಹೆಚ್ಚಿನ ವರದಕ್ಷಿಣೆಗಾಗಿ, ಹೆಣ್ಣು ಹೆತ್ತಿದ್ದಕ್ಕಾಗಿ ಮಹಿಳೆಗೆ ಗಂಡನ ಮನೆಯವರು ಕಿರುಕುಳ ನೀಡುವುದು, ಆಕೆಯ ಸಾವಿಗೆ ಕಾರಣವಾಗುವುದು ಅತ್ಯಂತ ಶೋಚಣೀಯ ವ್ಯವಸ್ಥೆ ಎಂದು ಹೈಕೋರ್ಟ್ ವಿಶಾದ ವ್ಯಕ್ತಪಡಿಸಿದೆ.
ಇದು ಮಹಿಳೆಯ ಘನತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಆಕೆಯ ಹಕ್ಕುಗಳ ಮೇಲಿನ ದಾಳಿ ಎಂದು ಕೋರ್ಟ್ ಹೇಳಿದೆ. ಗಂಡನ ಮನೆ ಸೇರುವ ಮಗಳು ಕ್ಷೇಮವಾಗಿ, ಸಂತಸವಾಗಿ ಇರಬೇಕೆಂದು ಪೋಷಕರು ಬಯಸುತ್ತಾರೆ. ಆದರೆ ಗಂಡನ ಮನೆಯವರು ಅಕೆಗೆ ಕಿರುಕುಳ ನೀಡಿ ಸಾವಿಗೆ ಕಾರಣರಾಗುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಮಹಿಳೆಯು ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾನು ಜನ್ಮ ನೀಡಿದ ಮಕ್ಕಳನ್ನೇ ತೋರಿಸಿ ತನಗೆ ಕಿರುಕುಳ ನೀಡಿದಾಗ ಮನಸ್ಸಿಗೆ ಆಗುವ ಆಘಾತವು ಹೆಚ್ಚಿನದ್ದಾಗಿರುತ್ತದೆ ಎಂದು ಕೋರ್ಟ್ ಹೇಳಿದೆ. ‘ಇಲ್ಲಿ ವಿಜ್ಞಾನವನ್ನು ಉಪೇಕ್ಷಿಸಲಾಗುತ್ತಿದೆ. ವಿಜ್ಞಾನದ ಪ್ರಕಾರ, ಅಂಡಾಣು ಯಾವ ವರ್ಣತಂತು ಇರುವ ವೀರ್ಯಾಣುವಿನ ಜೊತೆ ಸೇರುತ್ತದೆ ಎಂಬುದು ಭ್ರೂಣದ ಲಿಂಗವನ್ನು ತೀರ್ಮಾನಿಸುತ್ತದೆ’ ಎಂದು ಹೈಕೋರ್ಟ್ ತಿಳಿಸಿದೆ.