ಮಳವಳ್ಳಿ ತಾಲೂಕಿನಲ್ಲಿ ಒಂದೇ ಕಡೆ ಪಟಾಕಿ ಮಳಿಗೆಯನ್ನು ತೆರೆಯಲು ಅವಕಾಶವಿದೆ ಎಂದು ತಹಸೀಲ್ದಾರ್ ಕೆ. ಎನ್ ಲೋಕೇಶ್ ತಿಳಿಸಿದರು.
ಮಳವಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಪಟಾಕಿ ವರ್ತಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅತ್ತಿಬೆಲೆ ಮತ್ತು ಆನೇಕಲ್ ನಲ್ಲಿ ಪಟಾಕಿ ಮಳಿಗೆಗಳ ದುರಂತ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಮಳವಳ್ಳಿ ತಾಲೂಕಿನಾದ್ಯಂತ ಶಾಂತಿ ಕಾಲೇಜಿನ ಮುಂಭಾಗದಲ್ಲಿ ಇರುವ 30 ಎಕರೆ ಜಾಗದಲ್ಲಿ 50 ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪಟಾಕಿ ವರ್ತಕರು ಸಹಕರಿಸಬೇಕೆಂದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟಾಕಿ ಮಳಿಗೆ ತೆರೆಯುವ ಅನುಮತಿಯನ್ನು ಮಳವಳ್ಳಿ ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ರೂಪದಲ್ಲಿ ಅನುಮತಿ ನೀಡಲಾಗುತ್ತಿದೆ. ಪರವಾನಗಿ ಇಲ್ಲದೆ ಪಟಾಕಿ ಮಾರಾಟ ಮಾಡಿದರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಮಾತನಾಡಿ, ಪಟಾಕಿ ಮಳಿಗೆಗೆ ದುರಂತ ನಂತರ ಯಾವುದೇ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನದಾತ್ಯಂತ ಒಂದೇ ಕಡೆ ಪಟಾಕಿ ಮಳಿಗೆಯನ್ನು ತೆರೆಯಲು ಅವಕಾಶ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಮತ್ತು ಅನುಮತಿ ಪಡೆಯದೆ ಇರುವ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನಡೆದರು.
ಸಭೆಯಲ್ಲಿ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಹರೀಶ್, ಪಿಎಸ್ಐ ಅಶೋಕ್, ಪುರಸಭೆ ಪರಿಸರ ಇಂಜಿನಿಯರ್ ನಾಗೇಂದ್ರ, ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಪಟಾಕಿ ವರ್ತಕರು ಹಾಜರಿದ್ದರು.