Sunday, September 8, 2024

ಪ್ರಾಯೋಗಿಕ ಆವೃತ್ತಿ

ಟಿ20 ವಿಶ್ವಕಪ್ ವಿಜೇತ ತಂಡ ಭಾರತಕ್ಕೆ ಆಗಮನ; ಚಾಂಪಿಯನ್ಸ್‌ಗೆ ಭವ್ಯ ಸ್ವಾಗತ

ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಭಾರತಕ್ಕೆ ಆಗಮಿಸಿದೆ. ಟಿ20 ವಿಶ್ವ ಚಾಂಪಿಯನ್‌ಗಳು ದೆಹಲಿಯಲ್ಲಿ ಬಂದಿಳಿಯುತ್ತಿದ್ದಂತೆ ಭಾಂಗ್ರಾ, ಡೋಲಿನ ಮೂಲಕ ಭವ್ಯ ಸ್ವಾಗತ ಮಾಡಲಾಗಿದೆ.

ಗುರುವಾರ ಬೆಳಗ್ಗೆ ಐಟಿಸಿ ಮೌರ್ಯ ಹೋಟೆಲ್‌ಗೆ ಭಾರತ ಕ್ರಿಕೆಟ್ ತಂಡ ಆಗಮಿಸುತ್ತಿದ್ದಂತೆ ದೆಹಲಿ ಬೀದಿಗಳಲ್ಲಿ ಹರ್ಷೋದ್ಗಾರ ಕೇಳಿಬಂದಿದೆ. ನಾಯಕ ರೋಹಿತ್ ಶರ್ಮಾ ಮತ್ತು ಅವರ ತಂಡವನ್ನು ಡೋಲಿನ ನಾದದೊಂದಿಗೆ ಭಾಂಗ್ರಾ ನೃತ್ಯದ ಮೂಲಕ ಸ್ವಾಗತಿಸಲಾಗಿದೆ.

“>

ಕಳೆದ ಶನಿವಾರ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ಟೀ ಇಂಡಿಯಾ ವಿಶ್ವಕಪ್ ಗೆದ್ದಿದೆ. ಅದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ, ಅದರ ಸಹಾಯಕ ಸಿಬ್ಬಂದಿ, ಕೆಲವು ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬಸ್ಥರು ಕಳೆದ ಎರಡು ದಿನಗಳಿಂದ ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದ್ದರು.

ಇದೀಗ ಗುರುವಾರ ತಂಡವು ದೆಹಲಿಗೆ ಆಗಮಿಸಿದೆ. ಏರ್‌ ಇಂಡಿಯಾ ವಿಶೇಷ ವಿಮಾನದಲ್ಲಿ ತಂಡವನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳು ತಂಡಕ್ಕೆ ಭವ್ಯ ಸ್ವಾಗತ ಕೋರಿದರು.

ಬುಧವಾರ ಮುಂಜಾನೆ ಸುಮಾರು 4.50ಕ್ಕೆ ಬಾರ್ಬಡೋಸ್‌ನ ಬ್ರಿಡ್ಜ್‌ ಟೌನ್‌ ಪಟ್ಟಣದಿಂದ ಏರ್‌ ಇಂಡಿಯಾ ಚಾಂಪಿಯನ್ಸ್ 2024 ವಿಶ್ವಕಪ್ ಹೆಸರಿಗೆ ವಿಶೇಷ ಎಐಸಿ24ಡಬ್ಲ್ಯೂಸಿ ವಿಮಾನವು ಹೊರಟ್ಟಿದ್ದು, ಸುಮಾರು 16 ಗಂಟೆಗಳ ತಡೆರಹಿತ ಪ್ರಯಾಣದ ಬಳಿಕ ಗುರುವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ದೆಹಲಿಗೆ ಬಂದು ತಲುಪಿದೆ.

ಇನ್ನು ಭಾರತ ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಅದಾದ ಬಳಿಕ ಸಂಜೆ 4 ಗಂಟೆಗೆ ದೆಹಲಿಯಿಂದ ವಾಣಿಜ್ಯ ನಗರಿ ಮುಂಬೈಗೆ ತಂಡವು ತೆರಳಲಿದೆ. ಇಲ್ಲಿ ಸಂಜೆ 5ರಿಂದ 7ರ ಸುಮಾರಿಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಸಂಜೆ 7.30ಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!