75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಪಾದಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯಿತು.
75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಗಣ್ಯರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯಲ್ಲಿ ಇಂದು ಚಾಲನೆ ನೀಡಲಾಯಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ನಿಂದ -ಶ್ರೀರಂಗಪಟ್ಟಣ ಶ್ರೀರಂಗನಾಥ ದೇವಾಲಯದವರೆಗೂ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.
ಕಾಂಗ್ರೆಸ್ ಹೈ ಕಮಾಂಡ್ ಆದೇಶದಂತೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಜಿಲ್ಲೆಯಲ್ಲಿ 75 ಕಿಮೀ ನಡೆಯುವ ಮೂಲಕ ವಿಭಿನ್ನವಾಗಿ ಆಚರಿಸುವ ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ 9 ಗಂಟೆಗೆ ಕೆಆರ್ಎಸ್ ಜಲಾಶಯದ ಬಳಿ ಇರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವರಾದ ಚಲುವರಾಯಸ್ವಾಮಿ , ಎಂ. ಎಸ್. ಆತ್ಮಾನಂದ ಚಾಲನೆ ನೀಡಿದರು.
ಕೆಆರ್ಎಸ್ ನಿಂದ ಹೊರಟ ಪಾದಯಾತ್ರೆಗೆ ಶುಭಕೋರಿ ಕೆಆರ್ಎಸ್ ಅರಳಿ ಕಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಶುಭ ಕೋರಿದರು.
ಕಾಂಗ್ರೆಸ್ ನಾಯಕರ ಮುಂದಾಳತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದರು.
ಹುಲಿಕೆರೆ, ಪೇಪರ್ಮಿಲ್ ಸರ್ಕಲ್, ಬೆಳಗೊಳ, ಹೊಸ ಆನಂದೂರು ಸರ್ಕಲ್, ಪಂಪ್ ಹೌಸ್ ಸರ್ಕಲ್, ಪಿ.ಹೊಸಹಳ್ಳಿ, ಪಾಲಹಳ್ಳಿ ಸೇರಿದಂತೆ ಪಶ್ಚಿಮವಾನಿ , ಶ್ರೀರಂಗಪಟ್ಟಣ ಪ್ರವೇಶ ದ್ವಾರಗಳಲ್ಲಿ ಗ್ರಾಮದ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿ ಬಂದ ಕಾಂಗ್ರೆಸ್ ಪಾದಯಾತ್ರಿಗಳಿಗೆ ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ, ಬಗೆಬಗೆಯ ಹೂವುಗಳ ಎರಚಿ ಹಾಲು, ಜ್ಯೂಸ್ ನೀಡಿ ಪಾದಯಾತ್ರಿಗಳನ್ನು ಬೀಳ್ಕೊಟ್ಟರು.
ಕೆಆರ್ಎಸ್ ನಿಂದ ಶ್ರೀರಂಗಪಟ್ಟಣದವರೆಗೂ ರಸ್ತೆಯುದ್ದಕ್ಕೂ ಕಾಂಗ್ರೆಸ್ ಬಾವುಟ, ದೇಶಕ್ಕೆ ಸ್ವತಂತ್ರ್ಯ ತಂದು ಕೊಟ್ಟ ದೇಶದ ಮಹಾ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದವು. ಕೆಲವು ವೃತ್ತಗಳಲ್ಲಿ ಪಾದಯಾತ್ರೆಯಲ್ಲಿ ಬಂದ ಜನರಿಗೆ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿ ಮೂಲಕ ಬಿಡಿ ಹೂ ಮೇಲಿಂದ ಎರಚಿ ಸೇಬುಹಣ್ಣುಗಳ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು.
ಸಂಜೆ 4 ಗಂಟೆಗೆ ಪಾದಯಾತ್ರಿಗಳು ಶ್ರೀರಂಗಪಟ್ಟಣದ ಮುಖ್ಯ ಬೀದಿಯ ಮೂಲಕ ಸಂಚರಿಸಿ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು.
ಮಾಜಿ ಸಚಿವ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾ ಮಾದ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ, ಜಿಲ್ಲಾ ಮುಖಂಡರಾದ ಡಾ.ರವೀಂದ್ರ ಸಿಎಂ.ದ್ಯಾವಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿದ್ದರು.