ಸಮ ಸಮಾಜದ ಆಶಯಗಳ ಈಡೇರಿಕೆಗಾಗಿ ಸಂಘಟನೆಯ ಹೋರಾಟ ಅತ್ಯಗತ್ಯ ಎಂದು ಕರ್ನಾಟಕ ಸ್ವಾಭಿಮಾನಿ ಸಮಸಮಾಜ (ಕೆಎಸ್ಎಸ್) ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ನಾಗಮಂಗಲ ಹೇಳಿದರು.
ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ (ಕೆಎಸ್ಎಸ್) ಸಂಘಟನೆ ಆಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಸಮಿತಿ ರಚನೆ ಸಭೆಯಲ್ಲಿ ರಾಜ್ಯ ಸಮಿತಿಯ ನೂತನ ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ಸ್ವಾಭಿಮಾನಿ ಸಮ ಸಮಾಜವು ಕಳೆದ ಒಂದು ದಶಕದಿಂದಲೂ ವಿಶಿಷ್ಠ ರೀತಿಯಲ್ಲಿ ಹೋರಾಟ ಮತ್ತು ಸೇವಾಕಾರ್ಯಗಳನ್ನು ಸಮಾಜಮುಖಿಯಾಗಿ ಮಾಡಿಕೊಂಡು ಬರುತ್ತಿದೆ, ಇಂದು ಮಂಡ್ಯದ ಮಣ್ಣಿನಲ್ಲಿ ಹೋರಾಟದ ಹೊಸ ರೂಪರೇಷೆಗಳ ಬದಲಾವಣೆ ನಡೆದು, ಜನರ ನ್ಯಾಯಕ್ಕಾಗಿ ದುಡಿಯುವ ಸಂಕಲ್ಪ ಮಾಡಿದೆ ಎಂದು ನುಡಿದರು.
ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವುದು, ಕೌಶಲ್ಯ ಜ್ಞಾನಾರ್ಜನೆಗೆ ಹೆಚ್ಚು ಮಹತ್ವ ನೀಡುವುದು, ಉದ್ಯೋಗಿಯಾಗಿ- ಇಲ್ಲ ಸ್ವಂತ ಉದ್ಯಮಿಯನ್ನಾಗಿ ರೂಪಿಸುವ ಧ್ಯೇಯ ನಮ್ಮದಾಗಿದೆ, ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಮಹಿಳಾ ಪರ ಧ್ವನಿಯಾಗಿ ನಿಲ್ಲುವುದು, ಸಮಾಜಿಕ ಜಾಗೃತಿ ಮೂಡಿಸುವ ಸುಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ರಾಜ್ಯ ಮತ್ತು ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಪತ್ರಗಳನ್ನು ನೀಡಲಾಯಿತು, ಸಂಘಟನೆಯ ನೂತನ ರಾಜ್ಯಾಧ್ಯಕ್ಷರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮಸಮಾಜ (ಕೆಎಸ್ಎಸ್) ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷ ಬಿ.ಎಸ್.ಸ್ವಾಮಿ, ಪ್ರಧಾನ ಕಾರ್ಯರ್ಶಿ ಲೋಕೇಶ್ ಮೌರ್ಯ, ಸಂಘಟನಾ ಕಾರ್ಯದರ್ಶಿಗಳಾದ ನಟರಾಜ್, ಡಾ.ಗಣೇಶ್, ಸುಂಡಹಳ್ಳಿ ಮಂಜುನಾಥ್, ಕಾನೂನು ಸಲಹೆಗಾರ ರಂಗನಾಥ್ ಪ್ರಸಾದ್, ಜಿಲ್ಲಾ ಸಮಿತಿ ಅಧ್ಯಕ್ಷ ಎ.ಪಿ.ಚೌಧರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಉಪಾಧ್ಯಕ್ಷ ನಾಗೇಂದ್ರ, ಚಂದ್ರು, ಲೋಕೇಶ್, ಸುಧಾಕರ್, ಮಂಜುನಾಥ್ ಮತ್ತಿತರರಿದ್ದರು.