ವೃದ್ದಾಶ್ರಮಗಳಲ್ಲಿ ನೆಲೆಸಿರುವ ವೃದ್ಧರಿಗೆ ಕೇವಲ ಊಟದ ವ್ಯವಸ್ಥೆ ಮಾಡಿದರೆ ಸಾಲದು. ಅವರಿಗೆ ಸಮಯಕ್ಕೆ ಸರಿಯಾದ ಔಷಧಗಳನ್ನು ನೀಡಬೇಕೆಂಬ ನಿಟ್ಟಿನಿಂದ ಇಂದು ಅಪೊಲೋ ಆಸ್ಪತ್ರೆಯಿಂದ ಉಚಿತವಾಗಿ ಔಷಧಗಳನ್ನು ವಿತರಿಸಲಾಗುತ್ತಿದೆ ಎಂದು ಸೇವಾಕಿರಣ ಟ್ರಸ್ಟ್ನ ಅಧ್ಯಕ್ಷ ಬಿ.ಸಿ.ಶಿವಾನಂದ ಹೇಳಿದರು.
ಮಂಡ್ಯ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಔಷಧದ ಕಿಟ್ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೇವಾಕಿರಣ ಟ್ರಸ್ಟ್ನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಲ್ಲಿನ ವೃದ್ಧ ರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಮುಖ್ಯ ನ್ಯಾಯಾಧೀಶರನ್ನು ಸಹ ಕರೆ ತಂದು ಅಗತ್ಯ ಕಾನೂನುಗಳ ಅರಿವನ್ನು ಮೂಡಿಸಲಾಗುತ್ತಿದೆ. ಇದರಿಂದ ಸೇವಾಕಿರಣ ವೃದ್ದಾಶ್ರಮದಲ್ಲಿ ನೆಲೆಸಿರುವ ವೃದ್ದರಿಗೆ ಅವರ ಮಕ್ಕಳಿಂದ ಅಥವಾ ಬೇರೆ ಯಾವುದಾದರೂ ಕಾನೂನು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್ ಮಾತನಾಡಿ, ವೃದ್ಧಾಪ್ಯದ ಸಮಯದಲ್ಲಿ ಔಷಧಗಳ ಅವಶ್ಯಕತೆ ಹೆಚ್ಚು ಇರುತ್ತದೆ. ಇದನ್ನು ಅರಿತ ಅಪೊಲೋ ಆಸ್ಪತ್ರೆಗಳ ಆಡಳಿತ ಮಂಡಳಿ ಔಷಧಿಗಳನ್ನು ಉಚಿತವಾಗಿ ನೀಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.
ವೃದ್ಧಾಶ್ರಮದಲ್ಲಿ ಯಾರೂ ಕೂಡ ಅನಾಥರು ಎಂಬ ಭಾವನೆಯಿಂದ ಬದುಕುವುದು ಬೇಡ. ವೃದ್ಧಾಶ್ರಮದಲ್ಲಿ ಎಲ್ಲರೂ ಒಂದು ಕುಟುಂಬ ಎಂಬ ಭಾವನೆಯಿಂದ ಬದುಕಬೇಕು. ವೃದ್ಧಾಶ್ರಮಕ್ಕೆ ಯಾವುದಾದರು ಸಮಸ್ಯೆ ಎದುರಾದಲ್ಲಿ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವರಾಮ್, ರಾಜಣ್ಣ, ಕಾರ್ಯದರ್ಶಿ ಪೂರ್ಣಿಮಾ ಮತ್ತಿತರರು ಹಾಜರಿದ್ದರು.