ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿಆರೋಪಿಯಾಗಿರುವ ಸಂಬಂಧ ಜೈಲು ಸೇರಿದ್ದ ಎ1 ಆರೋಪಿ ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ದೊರಕಿದ್ದು, ಇಂದು(ನ.16) ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.
ಮಠದ ಹಾಸ್ಟೆಲ್ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿ, ಪೋಕ್ಸೋ ಕೇಸು ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು ಜೈಲು ಸೇರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ನವೆಂಬರ್ 8ರಂದು ಜಾಮೀನು ನೀಡಿತ್ತು. ಹೀಗಾಗಿ ಇಂದು (ನವೆಂಬರ್ 16) ಮುರುಘಾಶ್ರೀ ಬರೋಬ್ಬರಿ 14 ತಿಂಗಳು ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಜಾಮೀನು ಪಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯನ್ನು ಚಿತ್ರದುರ್ಗ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು. ಜಾಮೀನು ನೀಡುವ ವೇಳೆ ಹೈಕೋರ್ಟ್, ಏಳು ಷರತ್ತು ವಿಧಿಸಿ, ಮಂಜೂರು ಮಾಡಿತ್ತು.
ಹಾಸ್ಟೆಲ್ನ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. 2022ರ ಸೆಪ್ಟಂಬರ್ 1ರಂದು ಬಂಧನ ಮಾಡಲಾಗಿತ್ತು. ಶ್ರೀಗಳ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದು, ಮೊದಲ ಪ್ರಕರಣದಲ್ಲಿ ಮಾತ್ರ ಅವರಿಗೆ ಜಾಮೀನು ದೊರಕಿದೆ.
ಜಾಮೀನು ನೀಡುವ ವೇಳೆ ಹೈಕೋರ್ಟ್ ನೀಡಿದ್ದ ಏಳು ಷರತ್ತು ಏನೇನು?
1.ವಿಚಾರಣೆಗೆ ಮುಗಿಯುವವರೆಗೂ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡುವಂತಿಲ್ಲ.
2.ಇಬ್ಬರ ಶ್ಶೂರಿಟಿಗಳನ್ನು ಒದಗಿಸಬೇಕು.
3.ಎರಡು ಲಕ್ಷ ಮೌಲ್ಯದ ಬಾಂಡ್ ಶ್ಶೂರಿಟಿ ನೀಡಬೇಕು.
4.ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಕಡ್ಡಾಯವಾಗಿ ಹಾಜರಾಗಬೇಕು.
5.ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ.
6.ವಿದೇಶಗಳಿಗೆ ಪ್ರಯಾಣಿಸುವಂತಿಲ್ಲ, ಪಾಸ್ಪೋರ್ಟ್ ನ್ಯಾಯಾಲಯಕ್ಕೆ ನೀಡಬೇಕು.
7.ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ.
ವಿಚಾರಣೆಗೆ ಮುಗಿಯುವವರೆಗೂ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡುವಂತಿಲ್ಲ ಎಂದು ಹೈಕೋರ್ಟ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಜೈಲಿನಿಂದ ನೇರವಾಗಿ ದಾವಣಗೆರೆ ಕಡೆ ಹೊರಟಿದ್ದು, ಶಿವಯೋಗಿ ಮಂದಿರದಲ್ಲೇ ಉಳಿದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಕೃಪೆ: ಈದಿನ.ಕಾಂ