ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮೈಸೂರಿನ ಸಿಲ್ಕ್ ವೀವಿಂಗ್ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಅನಿಲ್ಕುಮಾರ್ ಒತ್ತಾಯಿಸಿದರು.
ವಿಧಾನಸಭಾ ಚುನಾವಣೆ ನಂತರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಕೆಸಿಎನ್, ಮತದಾರರಿಗೆ ಹಣ ಹಂಚಲು ಮುಖಂಡರು ಹಾಗೂ ಬೆಂಬಲಿಗರು ವಿಫಲರಾದರು ಎನ್ನುವ ವಿಡಿಯೋ ಹರಿದಾಡಿತ್ತು. ಮಾತ್ರವಲ್ಲದೆ ಕೆಲವು ಕಡೆ ಹಣ ತಲುಪಲಿಲ್ಲ. ಆದ್ದರಿಂದ ಅದನ್ನು ಹಿಂದಿರುಗಿಸಿ ಜನಕಲ್ಯಾಣ ಕಾರ್ಯಕ್ರಮ ಮಾಡೋಣವೆಂದು ಹೇಳಿದ್ದರು. ಈ ಕುರಿತು ತನಿಖೆ ನಡೆಸುವಂತೆ ರಾಜ್ಯಚುನಾವಣಾ ಆಯೋಗಕ್ಕೆ 2023 ಜು.11ರಂದು ಮೈಸೂರಿನ ಎಸ್.ಧನಂಜಯ ಎಂಬುವರು ದೂರು ದಾಖಲು ಮಾಡಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಘಟನೆ ಸಂಬಂಧ ಕ್ರಮ ವಹಿಸುವಂತೆ ಮಂಡ್ಯ ಡಿಸಿಗೆ ಚುನಾವಣಾ ಆಯೋಗ 2023 ಆ.9ರಂದು ನಿರ್ದೇಶನ ನೀಡಿದೆ. ಆದರೆ ಈವರೆಗೆ ಕೆಸಿಎನ್ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಸೂಕ್ತ ಸಾಕ್ಷಾೃಧಾರ ಒದಗಿಸಲಾಗಿದೆ. ಆದ್ದರಿಂದ ಕಠಿಣ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಮೈಸೂರಿನ ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ ಪಿ.ಪಿ.ಬಾಬುರಾಜ್, ಮೈಸೂರಿನ ಕೆಎಸ್ಐಸಿ ಹೊರಗುತ್ತಿಗೆ ಮತು ಇತರೆ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಸ್.ಧನಂಜಯ, ವಕೀಲ ಜಿ.ವಿ.ಯತೀಶ್ ಇದ್ದರು.