ರೂಪದರ್ಶಿ ಪವಿತ್ರಗೌಡಗೆ ಅಶ್ಲೀಲ ಮೆಸೇಜ್ ಕಳಿಸಿ ಎಂಬ ಒಂದೇ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಗೌಡ ವಿರುದ್ದ ರಾಜ್ಯ ಸರ್ಕಾರವು ಕಠಿಣ ಕಾನೂನು ಕ್ರಮ ಕೈಗೊಂಡು ಗಲ್ಲುಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಂಡ್ಯನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದರ್ಶನ್ ಹಾಗೂ ಪವಿತ್ರಗೌಡ ವಿರುದ್ದ ಘೋಷಣೆಗಳನ್ನು ಕೂಗಿದರು.
ಚಲನಚಿತ್ರದಲ್ಲಿ ಅದರ್ಶ ನಟನಂತೆ ಕಾಣುವು ದರ್ಶನ್ ನಿಜ ಜೀವನದಲ್ಲಿ ಖಳನಾಯಕನಿಗಿಂತಲೂ ಕ್ರೂರವಾಗಿ ನಡೆದುಕೊಂಡಿದ್ದಾರೆ. ಹಣದ ಮದ, ಹುಚ್ಚು ಅಭಿಮಾನಿಗಳ ಬೆಂಬಲದಿಂದ ಕೊಬ್ಬಿರುವ ದರ್ಶನ್ ಹೋದ ಕಡೆಯಲ್ಲ ವಿವಾದಗಳನ್ನು ಸೃಷ್ಠಿಸಿ ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆಂದು ಕಿಡಿಕಾರಿದರು.
ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಆತ ಯಾವುದೇ ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಆದರೆ ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಮುಂದೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಿದರೆ. ನಾವು ಸುಮ್ಮನೆ ಕೂರುವುದಿಲ್ಲ. ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಟ ದರ್ಶನ್ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದೆ. ಅವರ ಮೇಲೆ ರೌಡಿ ಶೀಟ್ ಓಪನ್ ಮಾಡಬೇಕು. ಈ ಹಿಂದೆ ಅವರು ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್ ಸೇವಿಸಿ ಮೈಸೂರಿನಲ್ಲಿ ಕಾರು ಅಪಘಾತ ಮಾಡಿದ್ದರು. ಆಗಲೇ ಇವರ ವಿರುದ್ಧ ಕ್ರಮ ಕೈಗೊಂಡು ಬುದ್ದಿ ಕಲಿಸಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದರು.
ದರ್ಶನ್ ಯಾವ ಸೀಮೆ ಭೂಮಿಪುತ್ರ
ಕೆಲವು ಸಂಘಟನೆಗಳು ದರ್ಶನ್ ಗೆ ಭೂಮಿಪುತ್ರ ಬಿರುದು ನೀಡಿ ಕಳಂಕ ತಂದಿವೆ. ದರ್ಶನ್ ಯಾವಾಗ ಭೂಮಿ ಉತ್ತಿದ್ದ, ಬಿತ್ತಿದ್ದ, ಹಣ ಇದೆ ಅಂತಾ ತೋಟ ಮಾಡಿಕೊಂಡಿದ್ದಾನೆ. ಅಳುಗಳ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ನಿಜವಾದ ರೈತ ಅಲ್ಲ. ಈತ ಒಬ್ಬ ಕಾಮುಕ, ರೌಡಿ, ಕೊಲೆಗಡುಕ, ರೇಪಿಸ್ಟ್, ಡ್ರಗ್ಸ್ ಗಿರಾಕಿ ಆಗಿದ್ದಾನೆ. ಇಂತಹವನಿಗೆ ಭೂಮಿಪುತ್ರ ಬಿರುದು ನೀಡಿ ಆ ಬಿರುದಿಗೆ ಕಳಂಕ ತಂದಿದ್ದಾರೆ. ಇದು ನಾಚಿಕೆಗೇಡು ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಇಂಗಲಕುಪ್ಪೆ ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.