ಡಿಸೆಂಬರ್ 30ರಂದು ಅಮಿತ್ ಶಾ ಮಂಡ್ಯ ಜಿಲ್ಲೆಗೆ ಬರುತ್ತಿರುವುದರಲ್ಲಿ ಆಶ್ಚರ್ಯ ಪಡಬೇಕಿಲ್ಲ. ಮುಂದಿನ ಮೇ ತಿಂಗಳವರೆಗೆ ಅಮಿತ್ ಶಾ ಹಾಗೂ ಮೋದಿ ಕರ್ನಾಟಕಕ್ಕೆ ಬರುತ್ತಲೇ ಇರುತ್ತಾರೆ. ಅವರು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಬರುತ್ತಿಲ್ಲ, ಮತ ಕೇಳಲು ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಶ್ರೀರಂಗಪಟಣ ತಾಲೂಕಿನ ಕೆಆರ್ಎಸ್ ನಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡಕ್ಕೆ ಅಮಿತ್ ಶಾ ಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರಿಗೆ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಕ್ಕಿಂತ ಮತಗಳಿಸುವುದೇ ಮುಖ್ಯ. ಅದಕ್ಕಾಗಿ ಬರುತ್ತಿದ್ದಾರೆ. ಈಗಾಗಲೇ ಮಂತ್ರಿಗಳ ದಂಡೇ ರಾಜ್ಯಕ್ಕೆ ಬರುತ್ತಿದೆ. ಮೋದಿ ಕೂಡ ಬರುತ್ತಾರೆ. ಅದರಿಂದ ನಮಗೇನು ತೊಂದರೆ ಆಗದು ಎಂದು ತಿಳಿಸಿದರು.
ಜನತೆ ತೀರ್ಮಾನಿಸುತ್ತಾರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಡಿ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವರು ಜೆಡಿಎಸ್ ಮತ್ತು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳದೆ, ಇನ್ನೇನು ನಮ್ಮ ಜೆಡಿಎಸ್ ಗೆ ಮತ ಹಾಕಲಿ ಎಂದು ಹೇಳಲು ಸಾಧ್ಯವೇ? ಇಂದು ಬಹಳ ಜನರಿಗೆ ಸಿಎಂ ಆಗಲು ಆಸೆ ಇದೆ. ಆದರೆ ಅಂತಿಮವಾಗಿ ದೇವರು ಮತ್ತು ಜನತೆಯ ಆಶೀರ್ವಾದ ಯಾರ ಪರವಾಗಿರುತ್ತೋ ಅವರು ಸಿಎಂ ಆಗ್ತಾರೆ ಎಂದರು.
ಏಳಕ್ಕೆ 7 ಸ್ಥಾನ ಗೆಲ್ಲುತ್ತೇವೆ
ಮಂಡ್ಯ ಜಿಲ್ಲೆಯಲ್ಲಿ ಪಂಚರತ್ನಯಾತ್ರೆಗೆ ಅತ್ಯುದ್ಬುತವಾದ ಬೆಂಬಲವನ್ನು ಈ ಭಾಗದ ಜನತೆ ತೋರಿಸಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜನತೆಯ ಆಶೀರ್ವಾದ ಜೆಡಿಎಸ್ ಅಭ್ಯರ್ಥಿಗಳ ಪರವಾಗಿದ್ದು, ಈ ಬಾರಿಯೂ ಕಳೆದ ಬಾರಿಗಿಂತ ಹೆಚ್ಚು ಅಂತರದಿಂದ ಏಳು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಆತ್ಮವಿಶ್ವಾಸ ಮೂಡಿದೆ ಎಂದರು.
ಕೊರೋನಾ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರವೇ ಮುಂದೆ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ. ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧ್ಯಕ್ಷ ಡಿ. ರಮೇಶ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.