ಕೆ.ಆರ್.ಪೇಟೆ ತಾಲ್ಲೂಕಿನ ಹಿರೀಕಳಲೆ ಬಳಿ ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಿರೀಕಳಲೆ ಗ್ರಾಮದ ಸಂದೇಶ್ ಮತ್ತು ಮರಡಹಳ್ಳಿಯ ಭರತ್ ಮೃತ ಯುವಕರು.
ಈ ಇಬ್ಬರು ಯುವಕರು ಎಳನೀರು ವ್ಯಾಪಾರ ಮಾಡಿ, ತಮ್ಮ ಮನೆಯ ಸಂಸಾರಕ್ಕೆ ಆಸರೆಯಾಗಿದ್ದರು.
ಭಾನುವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಕಡೆಯಿಂದ ಹಿರೀಕಳಲೆ ಊರಿನ ಕಡೆ ಹೋಗುವಾಗ ಈ ಅಪಘಾತ ಸಂಭವಿಸಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ವಾಹನದ ಪತ್ತೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶೇ.50ರಷ್ಟು ಮನೆಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದಾರೆ. ಅಗತ್ಯ ಇರುವ ಕಡೆ ಪರಿಶೀಲನೆ ನಡೆಸಿ, ಅಫಘಾತ ನಡೆಸಿದ ವಾಹನ ಪತ್ತೆ ಹಚ್ಚಬೇಕೆಂದು ಹಿರೀಕಳಲೆ ಹಾಗೂ ಮರಡಹಳ್ಳಿ ಹಾಗೂ ಕೆ.ಆರ್.ಪೇಟೆ ಟೌನ್ ಅಗ್ರಹಾರ ಬಡಾವಣೆ ನಾಗರೀಕರು ಪೋಲೀಸನ್ನು ಒತ್ತಾಯ ಮಾಡಿದ್ದಾರೆ.