ಕೆರೆ ಹೂಳೆತ್ತಿ ಪುನಶ್ಚೇತನಗೊಳಿಸುವುದರಿಂದ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಹಾಗೂ ರೈತರಿಗೆ ಅನುಕೂಲ ವಾಗುವುದರ ಜೊತೆಗೆ ಹೆಚ್ಚು ನೀರು ಸಂಗ್ರಹವಾಗುವುದರಿಂದ ಅಂತರ್ಜಲದ ಮಟ್ಟ ಹೆಚ್ಚಳವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪುಟ್ಟಿಕೊಪ್ಪಲು ಕೆರೆ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ 474ನೇ ನಮ್ಮೂರು ನಮ್ಮ ಕೆರೆ ಹೊಳೆತ್ತುವ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಕಳೆದ 2016 ರಿಂದ ನಮ್ಮ ಸಂಸ್ಥೆ ವತಿಯಿಂದ ರಾಜ್ಯದ್ಯಂತ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಗಳ ಹೂಳೆತ್ತುವ ಕೆಲಸವನ್ನ ಮಾಡುತ್ತಿದ್ದೇವೆ, ಇದುವರೆಗೆ 475 ಕೆರೆಗಳನ್ನ ಪುನಶ್ಚೇತನ ಮಾಡಲಾಗಿದೆ ಇದಕ್ಕಾಗಿ ಸಂಸ್ಥೆಯ ವತಿಯಿಂದ 38 ಕೋಟಿ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ ಚಿಕ್ಕಯ್ಯ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಹೂಳೆತ್ತುವ ಮೂಲಕ ಕೆರೆಗಳಲ್ಲಿ ನೀರು ಸಂಗ್ರಹಣೆ ಮಾಡಿಸುತ್ತಿರುವುದು ಶ್ಲಾಘನೀಯ. ಈ ಒಂದು ಕಾರ್ಯಕ್ರಮವನ್ನು ನಮ್ಮ ಗ್ರಾಮಕ್ಕೆ ಕೊಟ್ಟಿರುವುದು ತುಂಬಾ ಅನುಕೂಲ ಮಾಡಿಕೊಟ್ಟಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನ, ತಾಲೂಕು ಕ್ಷೇತ್ರ ಯೋಜನಾಧಿಕಾರಿ ಮಮತಾ ಎನ್ ಶೆಟ್ಟಿ, ಅಭಿಯಂತರ ಸುರೇಶ್, ಕೇಂದ್ರ ಕಚೇರಿ ಯೋಜನಾಧಿಕಾರಿ ಪುಷ್ಪರಾಜ್, ಮೇಲ್ವಿಚಾರಕ ಶಿವಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ರೇಖಾ, ಕೃಷಿ ಮೇಲ್ವಿಚಾರಕ ನವೀನ್ ಕುಮಾರ್ ಉಪಸ್ಥಿತರಿದ್ದರು