ಪಾಂಡವಪುರ ತಾಲ್ಲೂಕಿನ ಬನಘಟ್ಟದ ವಿ.ಸಿ.ನಾಲೆಯ ಬಳಿ ನಿನ್ನೆಯಷ್ಟೆ ಕಾರು ಉರುಳಿ ಬಿದ್ದು ಐವರು ಜಲಸಮಾಧಿಯಾಗಿದ್ದರು. ಇಂದು ಅದೇ ಸ್ಥಳದಲ್ಲೇ ನಡೆಯಬೇಕಾಗಿದ್ದ ದುರಂತವೊಂದು ಕೂದಳೆಲೆ ಅಂತರದಲ್ಲಿ ತಪ್ಪಿದೆ.
ಘಟನೆಯ ವಿವರ
ಐವರು ಜಲಸಮಾಧಿಯಾದ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಪಾಂಡವಪುರ ಕಡೆಯಿಂದ ಬೇವಿನಕುಪ್ಪೆ ಕಡೆಗೆ ಹೊರಟಿದ್ದ ಎತ್ತಿನಗಾಡಿ ಎಳೆದೊಯ್ಯುತ್ತಿದ್ದ ಹಸುಗಳು ಇದ್ದಕ್ಕಿದ್ದಂತೆ ಬೆದರಿ, ವಿ.ಸಿ.ನಾಲೆಯ ಅಂಚಿಗೆ ಎಳೆದುಕೊಂಡು ಹೋದವು, ಎತ್ತಿನಗಾಡಿ ಹೊಡೆಯುತ್ತಿದ್ದ ರೈತ ಸ್ವಾಮೀಗೌಡ ಹರಸಾಹಸ ಪಟ್ಟು ಗಾಡಿ ಸಮೇತ ನಾಲೆಗೆ ಬೀಳುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿದರು.
ರಸ್ತೆಯಲ್ಲಿ ಹೋಗುತ್ತಿದ್ದ ಹಸುಗಳು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನೋಡಿ ಗಾಬರಿಗೊಂಡು ನಾಲೆಯ ಸಮೀಪಕ್ಕೆ ಗಾಡಿಯನ್ನು ಎಳೆದೊಯ್ದವು. ಇದರಿಂದ ಬೆಚ್ಚಿದ ರೈತ, ಕೂಡಲೇ ಗಾಡಿಯಿಂದ ಜಿಗಿದು ಹಸುಗಳನ್ನು ಗಾಡಿಯ ನೊಗದಿಂದ ಬಿಚ್ಚಿ ಓಡಿಸಿದರು. ಅಷ್ಟೇ ವೇಗವಾಗಿ ಓಡಿದ ಹಸುಗಳು ಶಾಸಕ ದರ್ಶನ್ ಪುಟ್ಟಣಯ್ಯ ಸಮೀಪವೇ ಬೆದರಿ ಓಡಿದವು.
ಈ ಸಂದರ್ಭದಲ್ಲಿ ಹಸುಗಳನ್ನು ಹಿಡಿಯಲು ಹೋಗಿ ಬಿದ್ದ ಅಧಿಕಾರಿಯೊಬ್ಬರು ಕೆಳಕ್ಕೆ ಬಿದ್ದರು. ನೋಡ ನೋಡುತ್ತಿದ್ದಂತೆ ನಡೆಯಬೇಕಾಗಿದ್ದ ಮತ್ತೊಂದು ದುರಂತವು ಕೂದಳೆಲೆ ಅಂತರದಲ್ಲಿ ತಪ್ಪಿ ಹೋಯಿತು. ಇದರಿಂದ ಶಾಸಕರು, ಅಧಿಕಾರಿಗಳು ಸೇರಿದಂತೆ ಅಲ್ಲಿದ್ದ ಜನರೆಲ್ಲ ನಿಟ್ಟುಸಿರು ಬಿಟ್ಟರು.