ಕಾಂಗ್ರೆಸ್ನವರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಾರೆ. ದಲಿತರಿಗೆ ಮಾಡುತ್ತಿರುವ ಅವಮಾನ ಇದು. ಕಾಂಗ್ರೆಸ್ ಪಕ್ಷ ರಾಜ್ಯಪಾಲರಲ್ಲಿ ಕೂಡಲೇ ಕ್ಷಮೆ ಕೇಳಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಮಂಡ್ಯ ನಗರದ ಕಾವೇರಿ ಉದ್ಯಾನವನ ಜಿಲ್ಲಾ ಬಿಜೆಪಿ ಘಟಕ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಕಾಂಗ್ರೆಸ್ ಮಾಡ್ತಾ ಇದೆ. ತಪ್ಪು ಮಾಡಿಲ್ಲ ಎಂದರೆ ಕೋರ್ಟ್ ನಲ್ಲಿ ಕೇಳಬೇಕು. ಅದನ್ನು ಬಿಟ್ಟು ಸಿಎಲ್ಪಿ ಮೀಟಿಂಗ್ ಮಾಡಿದರೆ ಏನು ಪ್ರಯೋಜನ ಇಲ್ಲ ಎಂದರು.
ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದರಿಂದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆನೇ ಮಾಡಬಾರದು ಎಂದರೆ ಅದು ತುಘಲಕ್ ದರ್ಬಾರ್ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ಬಾಂಗ್ಲಾದೇಶದಲ್ಲಿ ದಾಳಿಯಾಗಿರುವ ರೀತಿಯಲ್ಲೇ ರಾಜ್ಯದಲ್ಲೂ ಆಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜ ಹೇಳುತ್ತಾನೆ, ಆತ ಐಎಸ್ಐ ಏಜೆಂಟ್. ಬಾಂಗ್ಲಾ ಮಾದರಿಯಲ್ಲಿ ದಾಳಿ ಆಗುತ್ತೆ ಎನ್ನೋದಕ್ಕೆ ನಾಚಿಕೆ ಆಗಲ್ವಾ? ನಮ್ಮದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ, ನಮ್ಮದು ಭಾರತ. ಕಾಂಗ್ರೆಸ್ ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಕೆ.ಎಸ್.ನಂಜುಂಡೇಗೌಡ ಸೇರಿದಂತೆ ಮತ್ತಿತರರಿದ್ದರು.