ಮಳವಳ್ಳಿಯ 10 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಟ್ಯೂಷನ್ ಶಿಕ್ಷಕ ಕಾಂತರಾಜುವಿಗೆ ಜೀವಾವಧಿ ಶಿಕ್ಷೆ ಆಗುವಂತೆ ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕರಾದ ವೆಂಕಟರಮಣ ಸೀತಾರಾಮ್ ಭಟ್ ಅವರನ್ನು ಮಂಡ್ಯ ಜಿಲ್ಲೆಯ ವಿವಿಧ ಪ್ರಗತಿಪರ ಮತ್ತು ಮಹಿಳಾ ಪರ ಸಂಘಟನೆಗಳು ಶನಿವಾರ ಸನ್ಮಾನಿಸಿ, ಅಭಿನಂದಿಸಿದರು.
ರಾಜ್ಯ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜನಕನ್ನಾಗಿ ವೆಂಕಟರಮಣ ಸೀತಾರಾಮ್ ಭಟ್ ಅವರನ್ನು ನೇಮಕ ಮಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವೆಂಕಟರಮಣ ಸೀತಾರಾಮ್ ಭಟ್ ಅವರು ಅಂತಿಮವಾಗಿ ಅಪರಾಧಿ ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಂಡಿರುವುದು ಮಹಿಳಾ ಪರ ಹೋರಾಟಗಾರರಲ್ಲಿ ಸಂತಸವನ್ನು ತಂದಿದೆ.
ರಾಜ್ಯದಾದ್ಯಂತ ವ್ಯಕ್ತವಾಗಿತ್ತು ಆಕ್ರೋಶ
ಟ್ಯೂಷನ್ ಶಿಕ್ಷಕನಿಂದಲೇ ಅತ್ಯಾಚಾರಕೊಳಗಾಗಿ ಕೊಲೆಯಾದ ಬಾಲಕಿಯ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು, ನಾಡಿನ ಮೂಲೆ ಮೂಲೆಯಿಂದ ಈ ಘಟನೆ ಖಂಡಿಸಿ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಮುಖ್ಯವಾಗಿ ಮಂಡ್ಯದಲ್ಲಿ ಮಹಿಳಾ ಮುನ್ನಡೆ ಹಾಗೂ ಅತ್ಯಾಚಾರ ವಿರೋಧಿ ಆಂದೋಲನ ಸಮಿತಿಯ ನೇತೃತ್ವ ವಹಿಸಿದ್ದ ಮಲ್ಲಿಗೆ ಸಿರಿಮನೆ ಹಾಗೂ ಪೂರ್ಣಿಮ, ಸಿ.ಕುಮಾರಿ ನೇತೃತ್ವದಲ್ಲಿ ವ್ಯಾಪಕವಾಗಿ ಹೋರಾಟ ನಡೆಸಿ, ಆರೋಪಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಅಲ್ಲದೇ ಅತ್ಯಾಚಾರ ವಿರೋಧಿ ಆಂದೋಲನದ ತಂಡವು ನೊಂದ ಕುಟುಂಬದ ಜೊತೆಗೆ ನಿಂತು,ಘನ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ನಿರಂತರವಾಗಿ ಪಾಲೋಪ್ ಮಾಡಿ, ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ಮಳವಳ್ಳಿ ಬಾಲಕಿಯ ಅತ್ಯಾಚಾರ- ಕೊಲೆ ಪ್ರಕರಣ| ಆರೋಪಿ ಟ್ಯೂಷನ್ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
ತೀರ್ಪನ್ನು ಸ್ವಾಗತಿಸುತ್ತೇವೆ ; ಪೂರ್ಣಿಮ
ಈ ಸಂದರ್ಭದಲ್ಲಿ ಮಹಿಳಾ ಮುನ್ನಡೆಯ ಮತ್ತು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ರವರು ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ಕೊಲೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯಾಚಾರಿಗಳು ಬಿಡುಗಡೆಯಾದಾಗ ಹಾರ, ತುರಾಯಿಯೊಂದಿಗೆ ಸ್ವಾಗತಿಸುತ್ತಿರುವ ವಿಕೃತಿ ಮೆರೆವ ಸಂದರ್ಭದಲ್ಲಿ ಮಂಡ್ಯ ನ್ಯಾಯಾಲಯದ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ ಎಂದರು.
ಈ ತೀರ್ಪಿನಿಂದ ಒಂದು ರೀತಿ ಕುಟುಂಬಕ್ಕೆ ಸಮಾಧಾನ ದೊರಕಿದೆ, ಆದರೆ ಅತ್ಯಾಚಾರಗಳು ನಡೆಯದಂತೆ ತಡೆಗಟ್ಟಲು ಕಠಿಣ ಕಾನೂನು ರೂಪಿಸಬೇಕು, ಅತ್ಯಾಚಾರಿಗಳಿಗೆ ಭಯ ಬರುವಂತಹ ಕಾನೂನುಗಳು ಜಾರಿಯಾಗಬೇಕು. ಆಗ ಮಾತ್ರ ನಿಜವಾದ ನ್ಯಾಯದಾನ ಪಡೆಯಲು ಸಾಧ್ಯ ಎಂದರು.
ಇವತ್ತಿನ ಸನ್ನಿವೇಶದಲ್ಲಿ ಮುನಿರತ್ನ ಪ್ರಕರಣದ ಪ್ರಜ್ವಲ್ ರೇವಣ್ಣನ ಪ್ರಕರಣ, ಸೌಜನ್ಯ ಪ್ರಕರಣಗಳು ನಮಗೆ ಘಾಸಿ ಉಂಟು ಮಾಡುತ್ತಿರುವ ಸಂದರ್ಭದಲ್ಲಿ ಈ ತೀರ್ಪು ಬಂದಿರುವುದು ಸ್ವಾಗತಾರ್ಹ. ನ್ಯಾಯಾಧೀಶರಿಗೆ ಮತ್ತು ಸಮರ್ಥ ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸಲು ಯಶಸ್ವಿಯಾದ ವಿ ಎಸ್ ಭಟ್ ರವರಿಗೆ ಅಭಿಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವಕೀಲರ ಸಂಘ ಮಂಡ್ಯ ಜಿಲ್ಲಾಧ್ಯಕ್ಷ ಬಿ ಟಿ ವಿಶ್ವನಾಥ್ನ ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮುನ್ನಡೆಯ ಶಿಲ್ಪ, ಜ್ಯೋತಿ, ಸೌಮ್ಯ, ಅಂಜಲಿ, ಪತ್ರಕರ್ತ ಮೋಹನ್ ಮೈಸೂರು, ಅಸಾದುಲ್ಲಾ ಜಮಾತ್ ಸ್ಥಾನಿಕ ಉಪಾಧ್ಯಕ್ಷ ಹಾಗೂ ಅಬ್ದುಲ್ ವಾಹಿದ್ ಉಪಸ್ಥಿತರಿದ್ದರು.