Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇರಳ| ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಶಸ್ತ್ರಾಸ್ತ್ರ ತರಬೇತಿ ನಿಷೇಧಿಸಿದ ಹೈಕೋರ್ಟ್

ತಿರುವನಂತಪುರಂ ಜಿಲ್ಲೆಯ ದೇವಿ ದೇವಸ್ಥಾನದ ಆವರಣದಲ್ಲಿ ಆರೆಸ್ಸೆಸ್ಸ್‌ಗೆ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ನಿರ್ವಹಣೆಯಲ್ಲಿಈ ದೇವಸ್ಥಾನವಿದೆ.

ಆರ್‌ಎಸ್‌ಎಸ್ ಮತ್ತು ಅದರ ಸದಸ್ಯರು ದೇವಾಲಯದ ಆವರಣವನ್ನು ಅಕ್ರಮವಾಗಿ ಬಳಕೆ ಮಾಡುತ್ತಾರೆಂದು ಆರೋಪಿಸಿ ಅದನ್ನು ತಡೆಯುವಂತೆ ಕೋರಿ ಇಬ್ಬರು ಭಕ್ತರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಿರುವಾಂಕೂರು ದೇವಸ್ವಂ ಮಂಡಳಿಯ ಅದೀನದ ದೇಗುಲಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳು ನಡೆಸುವುದು ಮತ್ತು ಸಾಮೂಹಿಕ  ಶಸ್ತ್ರಾಸ್ತ್ರ ತರಬೇತಿಗೆ ಅವಕಾಶವಿಲ್ಲ ಎಂಬ ಟಿಡಿಬಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ನೆರವು ನೀಡುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ತಿರುವಾಂಕೂರು ದೇವಸ್ವಂ ಮಂಡಳಿಯ ನಿರ್ವಹಣೆಯಲ್ಲಿರುವ ಈ ದೇವಾಲಯದ ಆವರಣದಲ್ಲಿ ಯಾವುದೇ ಸಾಮೂಹಿಕ  ಆಯುಧ ಅಭ್ಯಾಸಗಳನ್ನು ಅನುಮತಿಸಲಾಗುವುದಿಲ್ಲ. ಪೊಲೀಸರು ಆಡಳಿತ ಅಧಿಕಾರಿಗಳಿಗೆ ಅಗತ್ಯ ಸಹಾಯವನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್‌ಕುಮಾರ್  ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತಿರುವಾಂಕೂರು ದೇವಸ್ವಂ ಮಂಡಳಿ ಮೇ 18 ರಂದು ಹೊಸ ಸುತ್ತೋಲೆಯನ್ನು ಹೊರಡಿಸಿತ್ತು. ಅದರ  ಪ್ರಕಾರ ದೇವಾಲಯಗಳಲ್ಲಿ ಆರ್‌ಎಸ್‌ಎಸ್‌ನ ಶಸ್ತ್ರಾಸ್ತ್ರ ತರಭೇತಿಗೆ ನಿಷೇಧ ವಿಧಿಸಲಾಗಿದೆ. ಅಲ್ಲದೆ ಆದೇಶ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು.

ಆರ್‌ಎಸ್‌ಎಸ್‌ನಿಂದ ದೇವಾಲಯದ ಸಂಕೀರ್ಣಗಳಲ್ಲಿ ಎಲ್ಲಾ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸಿ ಟಿಡಿಬಿ 2016 ರಲ್ಲಿ ಸುತ್ತೋಲೆ ಹೊರಡಿಸಿತ್ತು. 2016ರಲ್ಲಿ ಅಂದಿನ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳದಲ್ಲಿ ದೇವಾಲಯಗಳನ್ನು ಶಸ್ತ್ರಾಸ್ತ್ರಗಳ ಉಗ್ರಾಣವನ್ನಾಗಿ ಮಾಡಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಮತ್ತು ಈ ಬಗ್ಗೆ ಸರ್ಕಾರಕ್ಕೆ ಹೆಚ್ಚು ದೂರುಗಳು ಬರುತ್ತಿವೆ ಎಂದು ಹೇಳಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!