ಮಂಗಳೂರಿನ ಬಂಟ್ವಾಳದಲ್ಲಿ ವಕೀಲ ಕುಲ್ ದೀಪ್ ಶೆಟ್ಟಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿ ಕರ್ತವ್ಯ ಲೋಪ ಎಸಗಿರುವ ಪುಂಜಾಲಕಟ್ಟೆ ಪೋಲೀಸ್ ಠಾಣೆ ಪಿ.ಎಸ್.ಐ.ಸುತೇಶ್ ರವರನ್ನು ಈ ಕೂಡಲೇ ಅಮಾನತು ಮಾಡಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಒತ್ತಾಯಿಸಿದ್ದಾರೆ.
ನಾಗರೀಕರ ರಕ್ಷಣೆ ಮಾಡಬೇಕಾದ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಮಂಗಳೂರಿನ ಯುವ ವಕೀಲ ಕುಲ್ ದೀಪ್ ಶೆಟ್ಟಿ ಅವರ ಮೇಲೆ ಕಳ್ಳತನದಂತಹ ಸುಳ್ಳು ಆರೋಪ ಹೊರಿಸಿ ರಾತೋರಾತ್ರಿ ಅವರ ಮನೆಗೆ ನುಗ್ಗಿ ಅವರನ್ನು ಅರೆಬೆತ್ತಲೆ ಗೊಳಿಸಿ ಕಾನೂನು ಬಾಹಿರವಾಗಿ ಬಂಧಿಸಿರುವುದು, ರಾಜ್ಯಾದ್ಯಂತ ವಕೀಲರು ಮತ್ತು ಸಾರ್ವಜನಿಕರನ್ನು ಸಿಟ್ಟಿಗೇಳುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ಪೋಲೀಸರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯಗಳು ಮತ್ತು ಪೋಲೀಸ್ ಹಿರಿಯ ಅಧಿಕಾರಿಗಳ ಸ್ಪಷ್ಟ ಆದೇಶ ಇದ್ದರೂ ಸಹ ಅದನ್ನು ಸಾರಾಸಗಟಾಗಿ ಧಿಕ್ಕರಿಸಿ ಪುಂಜಾಲಕಟ್ಟೆ ಪೋಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸುತೇಶ್ ಮತ್ತು ಅವರ ಸಿಬ್ಬಂದಿ ಯುವವಕೀಲ ಕುಲ್ ದೀಪ್ ಶೆಟ್ಟಿ ಯವರ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿರುವುದು ಅತ್ಯಂತ ಖಂಡನೀಯ ವಿಚಾರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.